ಶಿವಮೊಗ್ಗ: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರೊಬ್ಬರ (Civic worker) ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ಪಾಲಿಕೆಯ 29ನೇ ವಾರ್ಡ್ನಲ್ಲಿ ಕಸ ತುಂಬುವ ಕೆಲಸ ಮಾಡುವ ಆಂಜಿನಿ ಎಂಬುವವರು ಭಾನುವಾರ ಬೆಳಿಗ್ಗೆ ಲಕ್ಷ್ಮೀ ಟಾಕೀಸ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಂದೇ ಬೈಕ್ನಲ್ಲಿ ಬಂದ ನಾಲ್ವರು ಯುವಕರು ಸೌಂಡ್ ಬಾಕ್ಸ್ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಆಂಜಿನಿ ಅವರ ಪಕ್ಕದಲ್ಲೆ ಹೋಗಿದ್ದಾರೆ. ಹಾಗಾಗಿ ಆಂಜಿನಿ ಅವರು ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು ಉರ್ದು ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ವಿದ್ಯಾನಗರ ಸೇತುವೆ ನಾಮಕರಣ ವಿಚಾರ, ಮುಖ್ಯಮಂತ್ರಿಗೆ ಪತ್ರ ಬರೆದ ಮಾಜಿ ಮಿನಿಸ್ಟರ್
ಇದನ್ನು ಪ್ರಶ್ನಿಸಿದ ಸಹೋದ್ಯೋಗಿ ರವಿಕಿರಣ್ ಅವರ ಎದುರೇ ಆಂಜಿನಿ ಅವರಿಗೆ ಮುಖ ಮತ್ತು ಮೈಕೈಗೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಇತರೆ ಕಾರ್ಮಿಕರು ಸ್ಥಳಕ್ಕೆ ಬರುವುದನ್ನು ಗಮನಿಸಿದ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








