SHIVAMOGGA LIVE NEWS | 3 ಮಾರ್ಚ್ 2022
ಸಿಗಂದೂರು ಚೌಡೇಶ್ವರಿ ದೇವಿ ಸನ್ನಿಧಿಗೆ ತೆರಳುತ್ತಿದ್ದ ಭಕ್ತರಿದ್ದ ಕ್ರೂಸರ್ ಪಲ್ಟಿಯಾಗಿ ಕಂದಕ್ಕೆ ಉರುಳಿದೆ. ಮಹಿಳೆಯೊಬ್ಬರು ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ.
ಬ್ಯಾಕೋಡು ಸಮೀಪ ಒಕ್ಕೋಡಿ ಬಳಿ ರಸ್ತೆ ಪಕ್ಕದ ಗುಂಡಿಗೆ ಕ್ರೂಸರ್ ಪಲ್ಟಿಯಾಗಿದೆ. ರಾತ್ರಿ 9 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ.
ಸ್ಥಳದಲ್ಲೇ ಮಹಿಳೆ ಸಾವು
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ 11 ಮಂದಿ ಮುರುಡೇಶ್ವರ ಪ್ರವಾಸ ಮುಗಿಸಿ ಸಿಗಂದೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಒಕ್ಕೋಡಿ ಬಳಿ ರಸ್ತ ಪಕ್ಕದ ಗುಂಡಿಗೆ ಕ್ರೂಸರ್ ಪಲ್ಟಿ ಹೊಡೆದಿದೆ. ಗೌರಮ್ಮ (55) ಎಂಬುವವರು ಮೃತಪಟ್ಟಿದ್ದಾರೆ.
ಗಾಯಾಳುಗಳು ಕುಂದಾಪುರಕ್ಕೆ
ವಿಚಾರ ತಿಳಿಯುತ್ತಿದ್ದ ಹಾಗೆ ಸ್ಥಳೀಯರು ಗಾಯಾಳುಗಳ ನೆರವಿಗೆ ಬಂದರು. ಅಪಘಾತ ಸ್ಥಳದಿಂದ ಎಲ್ಲರನ್ನು ರಕ್ಷಿಸಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ಕೊಡಿಸಲಾಯಿತು. ಸಿಗಂದೂರು ದೇವಸ್ಥಾನದ ಆಂಬುಲೆನ್ಸ್ ಮತ್ತು ಖಾಸಗಿ ವಾಹನದ ಮೂಲಕ ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಯಿತು.
ಸ್ಥಳಕ್ಕೆ ಬ್ಯಾಕೋಡು ಉಪ ಠಾಣೆ ಪೊಲೀಸರು, ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಹೆಚ್.ಆರ್.ರವಿಕುಮಾರ್ ಭೇಟಿ ನೀಡಿ ಗಾಯಾಳುಗಳಿಗೆ ನೆರವಾದರು.