ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಅಕ್ಟೋಬರ್ 2020
ಸಿಗಂದೂರು ಶ್ರೀ ಚೌಡೇಶ್ವರಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು ಎಂದು ಜಿಲ್ಲಾ ಆರ್ಯ ಈಡಿಗರ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.
VIDEO REPORT
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಎಲ್ಲ ಧರ್ಮದ ಜನರಿಗೆ ಗೌರವದೊಂದಿಗೆ ಅನೇಕ ಧಾರ್ಮಿಕ, ಸಾಮಾಜಿಕ ಸೇವೆ ಮತ್ತು ಸಹಕಾರ ನೀಡುತ್ತಾ ಬರುತ್ತಿರುವ ದೇವಸ್ಥಾನ ಆಡಳಿತ ಮಂಡಳಿ ಬಗ್ಗೆ ಕೆಲವರು ಇಲ್ಲಸಲ್ಲದ ಅಪಪ್ರಚಾರ ಮಾಡಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಚೌಡೇಶ್ವರಿಯು ಧರ್ಮದರ್ಶಿ ಡಾ.ರಾಮಪ್ಪನವರ ಮನೆ ದೇವರು. ಈ ಕುಟುಂಬ ಅನುವಂಶಿಕವಾಗಿ ದೇವಿಯನ್ನು ಪೂಜೆ ಮಾಡಿಕೊಂಡು ಬಂದಿದೆ. ಟ್ರಸ್ಟ್ ರಚನೆ ಮಾಡಿಕೊಂಡು ವೈದಿಕರ ಮೂಲಕ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಳೆದ 15 ವರ್ಷಗಳಿಂದ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಆಡಳಿತ ಮಂಡಳಿಯು ಸಮರೋಪಾದಿಯಲ್ಲಿ ಮೂಲ ಸೌಕರ್ಯ ಅಭಿವೃದ್ದಿ ಮಾಡಿದೆ ಎಂದರು.
ಈ ಕ್ಷೇತ್ರ ಪ್ರವಾಸಿ ಕೇಂದ್ರವೂ ಆಗಿದೆ ಹಾಗೂ ನೂರಾರು ಜನರಿಗೆ ಉದ್ಯೋಗ ನೀಡಿದೆ. ಅಭಿವೃದ್ದಿ ಹೊಂದುತ್ತಿರುವ ಈ ಹೊತ್ತಿನಲ್ಲಿ ಕೆಲವು ವ್ಯಕ್ತಿಗಳು ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೆಂಬ ಹುನ್ನಾರ ನಡೆಸುತ್ತಿದ್ದು, ಈ ಷಡ್ಯಂತ್ರದ ಹಿಂದಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನ್ನಣೆ ನೀಡಬಾರದು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪ್ರೊ.ಹೆಚ್.ಕಲ್ಲಣ್ಣ, ಮಹೇಶ್, ಗೀತಾ, ಸುಧಾಕರ್, ಜಿ.ಡಿ.ಮಂಜುನಾಥ್, ಉಮೇಶ್, ಎ.ಎಂ.ರಮೇಶ್ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]