ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ಒಂದು ಲಕ್ಷ ರೂ. ಮೌಲ್ಯದ ಕನ್ನಡಕ ಹಾಳು ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಏನಿದು ಪ್ರಕರಣ?
ವೀರಭದ್ರಪ್ಪ ಪೂಜಾರ್ ಅವರ ಮೇಲೆ ಅವರ ಸಂಬಂಧಿಯೇ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಳೆ ದ್ವೇಷದ ಮೇಲೆ ಹಲ್ಲೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಬಂಧಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಅಂತಿಮ ದರ್ಶನ ಪಡೆಯಲು ವೀರಭದ್ರಪ್ಪ ಪೂಜಾರ್ ಅವರು ತಮ್ಮ ಕುಟುಂಬದೊಂದಿಗೆ ಶಿಕಾರಿಪುರ ತಾಲೂಕು ಮಾಚಿಕೊಪ್ಪ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭ ವೀರಭದ್ರಪ್ಪ ಪೂಜಾರ್ ಅವರ ಮೇಲೆ ಹಲ್ಲೆಯಾಗಿದೆ. ಸಂಬಂಧಿಯೊಬ್ಬ ಏಕಾಏಕಿ ಬಂದು ವೀರಭದ್ರಪ್ಪ ಪೂಜಾರ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಬಲ ಭಾಗದ ಕಿವಿಯ ಕಡೆಗೆ ಹೊಡೆದಿದ್ದಾನೆ.
ಹಲ್ಲೆ ಮಾಡಿ ಜೀವ ಬೆದರಿಕೆಯನ್ನು ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯಾಗಿದ್ದರಿಂದ ವೀರಭದ್ರಪ್ಪ ಪೂಜಾರ್ ಅವರ ಪ್ರಜ್ಞೆ ತಪ್ಪಿದ್ದು, ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಜೀವ ಬೆದರಿಕೆ ಒಡ್ಡಿ, ಹಲ್ಲೆ ಮಾಡಿ, 1.10 ಲಕ್ಷ ರೂ. ಮೊತ್ತದ ಕನ್ನಡಕವನ್ನು ಹಾನಿಗೊಳಿಸಿದ ಸಂಬಂಧಿ ಮಂಜುನಾಥ್ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೀರಭದ್ರಪ್ಪ ಪೂಜಾರ್ ದೂರಿನಲ್ಲಿ ತಿಳಿಸಿದ್ದಾರೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.