ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಜನವರಿ 2022
ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಮಾಹಿತಿ ಹಿನ್ನೆಲೆ, ಪರಿಶೀಲನೆಗೆ ತೆರಳಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ತಳ್ಳಾಡಿ, ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಬಸವನಗಂಗೂರು ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ನಾಯ್ಕ್ ಅವರು ಪರಿಶೀಲನೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ.
ಏನಿದು ಪ್ರಕರಣ?
ಬಸವನಗಂಗೂರು ಗ್ರಾಮದ ಜಮೀನು ಒಂದರಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿತ್ತು. ಈ ಕುರಿತು ಗ್ರಾಮ ಲೆಕ್ಕಾಧಿಕಾರಿ ಅವರಿಗೆ ಮಾಹಿತಿ ಬಂದಿತ್ತು. ಆದ್ದರಿಂದ ಪರಿಶೀಲನೆ ತೆರಳಿದ್ದರು. ಆಗ ಜಮೀನಿನಲ್ಲಿ ಮೂರು ಲಾರಿಗಳು ನಿಂತಿದ್ದು ಗಮನಕ್ಕೆ ಬಂದಿದೆ.
‘ಮಣ್ಣು ತೆಗೆಯಲು ಅನುಮತಿ ಇದೆಯೇ’ ಎಂದು ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ನಾಯ್ಕ್ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಣ್ಣು ತೆಗೆಯುತ್ತಿದ್ದವರು ಸಿಟ್ಟಾಗಿದ್ದು, ಯೋಗೇಶ್ ನಾಯ್ಕ್ ಅವರನ್ನು ತಳ್ಳಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮೂವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.