SHIVAMOGGA LIVE NEWS | POT HOLE | 28 ಏಪ್ರಿಲ್ 2022
ಆಟೋ ಚಾಲಕರೊಬ್ಬರ ಸಮಯ ಪಜ್ಞೆ ಮತ್ತು ಧೈರ್ಯ ಮಗುವಿನ ಪ್ರಾಣ ಕಾಪಾಡಿದೆ. ಶಿವಮೊಗ್ಗ ನಗರದ ಪ್ರಮುಖ ರಸ್ತೆಯೊಂದರ ಪಕ್ಕದಲ್ಲಿ ತೋಡಲಾಗಿದ್ದ ಗುಂಡಿಯೊಳಗೆ ಬಿದ್ದ ಮಗುವನ್ನು ಆಟೋ ಚಾಲಕ ರಕ್ಷಣ ಮಾಡಿದ್ದಾರೆ.
ಶಿವಮೊಗ್ಗದ ಆಲ್ಕೊಳ ಸರ್ಕಲ್’ನಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಆಟೋ ಚಾಲಕ ಲೋಕೇಶ್ ಅವರ ಸಮಯ ಪ್ರಜ್ಞೆ ದುರ್ಘಟನೆ ತಪ್ಪಿಸಿದೆ.
ಏನಿದು ಘಟನೆ?
ಕಳೆದ ರಾತ್ರಿ ತಾಯಿ ಮತ್ತು ಮೂರು ವರ್ಷದ ಮಗು ಖಾಸಗಿ ಬಸ್ಸಿನಲ್ಲಿ ಆಗಮಿಸಿದ್ದಾರೆ. ಆಲ್ಕೊಳ ಸರ್ಕಲ್’ನಲ್ಲಿ ಬಸ್ಸು ಇಳಿದಿದ್ದಾರೆ. ಮಗುವನ್ನು ಬಸ್ಸಿನಿಂದ ಇಳಿಸಿ, ಲಗೇಜ್ ಕೆಳಗಿಳಿಸಿ ಪಕ್ಕಕ್ಕಿಡಲು ಮಹಿಳೆ ಮುಂದಾಗಿದ್ದಾರೆ. ಇಷ್ಟು ಹೊತ್ತಿಗೆ ಮಗು ನಾಪತ್ತೆಯಾಗಿತ್ತು.
ಗುಂಡಿಗೆ ಬಿದ್ದ ಮಗು
ಆಲ್ಕೊಳ ಸರ್ಕಲ್ ಅಯ್ಯಂಗಾರ್ ಬೇಕರಿ ಸಮೀಪ ರಸ್ತೆ ಪಕ್ಕದಲ್ಲೆ ದೊಡ್ಡ ಗುಂಡಿ ಇದೆ. ತಾಯಿ ಲಗೇಜ್ ಇಳಿಸಿಕೊಳ್ಳುವ ಹೊತ್ತಿಗೆ ಮಗು ಆ ಗುಂಡಿಯೊಳಗೆ ಬಿದ್ದು, ನೀರಿನಲ್ಲಿ ಮುಳುಗುತ್ತಿತ್ತು. ಇದನ್ನು ಗಮನಿಸಿದ ಆಟೋ ಚಾಲಕ ಲೋಕೇಶ್ ಅವರು ಗುಂಡಿಗೆ ಜಿಗಿದಿದ್ದಾರೆ. ಮಗುವನ್ನು ಕಾಪಾಡಿದ್ದಾರೆ.
ಇದನ್ನೂ ಓದಿ – ಆಟೋದಲ್ಲಿ ಸಿಕ್ಕ ಮೊಬೈಲ್ ಆಟೋ ಚಾಲಕನಿಗೆ ಮಾರಲು ಹೋಗಿ ಸಿಕ್ಕಿಬಿದ್ದ ಪ್ರಯಾಣಿಕ, ಮುಂದೇನಾಯ್ತು?
ಆಟೋ ಚಾಲಕ ಲೋಕೇಶ್ ಅವರ ಸಮಯ ಪ್ರಜ್ಞೆಯಿಂದ ದುರ್ಘಟನೆ ತಪ್ಪಿದೆ. ತಾಯಿ ಮತ್ತು ಮಗು ತಕ್ಷಣ ಸ್ಥಳದಿಂದ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳಿಗೆ ಹಿಡಿ ಶಾಪ
ಆಲ್ಕೊಳ ಸರ್ಕಲ್’ನಲ್ಲಿ ರಸ್ತೆ ಪಕ್ಕದಲ್ಲಿ ದೊಡ್ಡ ಗುಂಡಿ ತೆಗೆಯಲಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಈ ಗುಂಡಿ ತೆಗೆದಿರಬಹುದು ಎಂದು ಸ್ಥಳೀಯರು ಮತ್ತು ಆಟೋ ಚಾಲಕರು ಆಪಾದಿಸುತ್ತಾರೆ. ಘಟನೆ ಕುರಿತು ಕಳೆದ ರಾತ್ರಿಯೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ಇನ್ನು, ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ದೀಪಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ