ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಫೆಬ್ರವರಿ 2022
ಅಬಕಾರಿ ಇಲಾಖೆ ಸೀಜ್ ಮಾಡಿದ ಆಟೋವನ್ನೇ ಅದಲು ಬದಲು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಅಬಕಾರಿ ಸಿಬ್ಬಂದಿ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ಜ.17ರಂದು ತೀರ್ಥಹಳ್ಳಿ ಅಬಕಾರಿ ನಿರೀಕ್ಷಕ ಅಮಿತ್ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪದಲ್ಲಿ ಆಟೋ (ಕೆಎ-20 ಡಿ 5940) ಸೀಜ್ ಮಾಡಿದ್ದರು. ಸೀಜ್ ಮಾಡಿದ ಆಟೋವನ್ನು ತೀರ್ಥಹಳ್ಳಿಯ ಅಬಕಾರಿ ಕಚೇರಿ ಬಳಿ ತಂದು ನಿಲ್ಲಿಸಿದ್ದರು.
ಪ್ರಕರಣ ದಾಖಲಿಸುವ ಮುನ್ನವೇ ತನಿಖಾಧಿಕಾರಿ ಅಮಿತ್ಕುಮಾರ್ಗೆ ಕರೂನಾ ಸೋಂಕು ಕಾಣಿಸಿಕೊಂಡಿತ್ತು. ಜ.18ರಿಂದ 24ರವರೆಗೆ ಕ್ವಾರಂಟೈನ್ನಲ್ಲಿದ್ದ ಅವರು ಜ.25ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ಕಚೇರಿಗೆ ಬಂದು ಪ್ರಕರಣ ಪರಿಶೀಲಿಸಿದಾಗ ಸೀಜ್ ಮಾಡಿದ ಆಟೋ ಬದಲಾಗಿ ಬೇರೊಂದು ಆಟೋ ನಿಲ್ಲಿಸಿರುವುದು ಗಮನಕ್ಕೆ ಬಂದಿತ್ತು.
ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಪಟ್ಟಣದಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೂ ಸಿಗದಿದ್ದಾಗ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಆಟೋ ಅದಲು-ಬದಲು ಪ್ರಕರಣದ ಕೈವಾಡದಲ್ಲಿ ಅಬಕಾರಿ ಸಿಬ್ಬಂದಿ ಅಥವಾ ಮೂಲ ಮಾಲೀಕರ ಕೈವಾಡವಿದೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.