ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021
ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಶಿವಮೊಗ್ಗದಲ್ಲಿ ಬ್ಯಾಂಕ್ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಬಿ.ಹೆಚ್.ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕುವೆಂಪು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸಿದರು.
ದೇಶವ್ಯಾಪಿ ಬ್ಯಾಂಕ್ ನೌಕರರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾರ್ಮಿಕ ವಿರೋಧಿ ನೀತಿಗೆ ಆಕ್ರೋಶ
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀಡಿ, ಜನ ವಿರೋಧಿ ಬ್ಯಾಂಕಿಂಗ್ ನೀತಿ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕಿಂಗ್ ನಿಯಮಾವಳಿ ತಿದ್ದುಪಡಿ ಹಿಂಪಡೆಯಬೇಕು. ಸಾರ್ವಜನಿಕ ಬ್ಯಾಂಕ್ ಗಳ ಖಾಸಗೀಕರಣ ಮಾಡಬಾರದು. ಸಾಲ ವಸೂಲಿಗೆ ಕಠಿಣ ಕ್ರಮ ಜಾರಿಗೊಳಿಸಬೇಕು. ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ನೌಕರರು ಒತ್ತಾಯಿಸಿದರು.
ಖಾಸಗೀಕರಣದ ತಿದ್ದುಪಡಿ ಮಸೂದೆ ಜಾರಿಗೆ ತಂದರೆ ಸರ್ಕಾರ ತನ್ನ ಒಡೆತನದಲ್ಲಿರುವ ಯಾವುದೇ ಸಂಸ್ಥೆಯನ್ನು ತನಗೆ ಬೇಕಾದ ಯಾವುದೇ ವ್ಯಕ್ತಿಗೆ ಮಾರಿಕೊಳ್ಳಬಹುದು. ಈಗಾಗಲೇ ಖಾಸಗಿ ಒಡೆತನದ ಕಂಪನಿಗಳಿಗೆ ಹಲವು ಉಸ್ತುವಾರಿಗಳನ್ನು ಸರ್ಕಾರ ನೀಡಿದೆ. ಈಗ ಖಾಸಗಿ ಒಡೆತನಕ್ಕೆ ಒಪ್ಪಿಸಿದರೆ ಹುದ್ದೆ ಪಡೆಯಲು ಕೂಡ ಯುವಕರು ಲಂಚ ಕೊಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ ನೌಕರರ ಸಂಘಟನೆ ಪ್ರಮುಖರಾದ ಪುನೀತ್, ಎಂ.ಆರ್.ಹೆಗ್ಡೆ, ವೇಣುಗೋಪಾಲ್, ಎನ್.ಚಂದ್ರಶೇಖರ್, ಮಹಾಬಲೇಶ್ವರ ಹೆಗ್ಡೆ, ನಿರ್ಮಲಾ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ ಸದಸ್ಯರು ಇದ್ದರು.