SHIVAMOGGA LIVE NEWS | 28 ಮಾರ್ಚ್ 2022
ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿಗಳು, ಪೋಷಕರ ಮೇಲೆ ಜೇನು ದಾಳಿ ನಡೆಸಿವೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಶಿವಮೊಗ್ಗ ಮೇರಿ ಇಮ್ಯಾಕುಲೇಟ್ ಪ್ರೌಢಶಾಲೆಯಲ್ಲಿ ಜೇನು ಹುಳಗಳು ದಾಳಿ ನಡೆಸಿವೆ. ಬೆಳಗ್ಗೆ ಪರೀಕ್ಷೆ ಆರಂಭವಾಗುವ ಹೊತ್ತಿಗೆ ಜೇನು ದಾಳಿಯಾಗಿದೆ. ಕೆಲ ಹೊತ್ತು ಪರೀಕ್ಷಾ ಕೇಂದ್ರದ ಆವರಣದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.
ವಿದ್ಯಾರ್ಥಿಗಳು, ಪೋಷಕರ ಮೇಲೆ ದಾಳಿ
ಜೇನು ದಾಳಿಯಿಂದ ಐವರು ವಿದ್ಯಾರ್ಥಿಗಳು, ಕೆಲವು ಪೋಷಕರು, ಟಿವಿ ವಾಹಿನಿಯ ಕ್ಯಾಮರಾಮನ್ ಒಬ್ಬರು ಗಾಯಗೊಂಡಿದ್ದಾರೆ. ಜೇನು ದಾಳಿಗೆ ತುತ್ತಾಗಿದ್ದವರನ್ನು ಕೂಡಲೆ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು
ಜೇನು ದಾಳಿಗೆ ತುತ್ತಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ‘ಜೇನು ದಾಳಿಯ ಬಳಿಕ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಡವಾಗಿ ಪರೀಕ್ಷೆಗೆ ಬಂದಿದ್ದಾರೆ. ಅವರಿಗೆ ಹೆಚ್ಚುವರಿ ಪರೀಕ್ಷಾ ಸಮಯ ನೀಡಲಾಗುತ್ತದೆ. ಯಾವುದೆ ಆತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು’ ಎಂದು ಡಿಡಿಪಿಐ ಎನ್.ಎಂ.ರಮೇಶ್ ತಿಳಿಸಿದ್ದಾರೆ.
ಆಂಬುಲೆನ್ಸ್, ವೈದ್ಯರ ನಿಯೋಜನೆ
ಇನ್ನು, ಜೇನು ದಾಳಿಯ ವಿಚಾರ ತಿಳಿಯುತ್ತಿದ್ದ ಹಾಗೆ ಮೇರಿ ಇಮ್ಯಾಕುಲೇಟ್ ಶಾಲೆಯಲ್ಲಿ ವೈದ್ಯರು ಮತ್ತು ಆಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ‘ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಮನವಿ ಮಾಡಿ ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಆ ಶಾಲೆಯಲ್ಲಿ ನಿಯೋಜಿಸಲಾಗಿದೆ. ತುರ್ತು ಇದ್ದರೆ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕೂಡ ಸಿದ್ಧವಾಗಿ ಇರಿಸಲಾಗಿದೆ’ ಎಂದು ಡಿಡಿಪಿಐ ರಮೇಶ್ ಅವರು ತಿಳಿಸಿದ್ದಾರೆ.
ಅಧಿಕಾರಿಗಳು ಶಾಲೆಗೆ ದೌಡು
ಜೇನು ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಡಿಡಿಪಿಐ ಎನ್.ಎಂ.ರಮೇಶ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷೆ ಮುಗಿದ ಬಳಿಕ ಇವತ್ತು ಸಂಜೆಯೊಳಗೆ ಜೇನು ಗೂಡುಗಳನ್ನು ತೆರವು ಮಾಡುವಂತೆ ಶಾಲೆ ಆಡಳಿತ ಮಂಡಳಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಹಿಜಾಬ್ ತೆಗೆಯಲು ಒಪ್ಪದೆ ಮನೆ ಕಡೆ ಹೊರಟಿದ್ದ ವಿದ್ಯಾರ್ಥಿನಿಯ ಮನವೊಲಿಕೆ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200