ಶಿವಮೊಗ್ಗ ಲೈವ್.ಕಾಂ | SHIMOGA | 07 ಜನವರಿ 2020
ಭದ್ರಾ ನಾಲೆಗಳಲ್ಲಿ ನೀರು ಹರಿಸಲು ತೀವ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಬಿಆರ್ಪಿಯ ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿಗೆ ಸತತ 120 ದಿನಗಳ ಕಾಲ ನೀರು ಹರಿಸಲು ನೀರಾವರಿ ನಿಗಮ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಎಡದಂಡೆ ನಾಲೆಯಲ್ಲಿ ಜ.7ರ ಮಧ್ಯರಾತ್ರಿ ಹಾಗೂ ಬಲದಂಡೆ ನಾಲೆಯಲ್ಲಿ ಜ.8ರ ಮಧ್ಯರಾತ್ರಿಯಿಂದ ನೀರು ಹರಿಸಲಾಗುತ್ತದೆ.
ಮೇ 6ರ ಮಧ್ಯರಾತ್ರಿ ನೀರನ್ನು ನಿಲ್ಲಿಸಲಾಗುವುದು. ಭದ್ರಾ ಬಲದಂಡೆ ನಾಲೆಯ 90,622 ಹೆಕ್ಟೇರ್ ಹಾಗೂ ಎಡದಂಡೆ ನಾಲೆಯ 11,882 ಹೆಕ್ಟೇರ್ ಸೇರಿ ಒಟ್ಟು 1,02,504 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ.
ಭದ್ರಾ ಎಡ, ಬಲ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಶಾಖಾ ನಾಲೆಗಳ ಮೂಲಕ ನೀರು ಹರಿಸಲು ನೀರಾವರಿ ನಿಗಮದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದರೊಂದಿಗೆ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗಾರರ ಆತಂಕ ದೂರಾದಂತಾಗಿದೆ. ಜತೆಗೆ ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರುಣಿಸಲು ಇದರಿಂದ ಅನುಕೂಲವಾಗಲಿದೆ. ಈ ವರ್ಷ ಭದ್ರಾ ಜಲಾಶಯ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರ ಆತಂಕ ದೂರವಾಗಿದೆ.
ಕುಡಿಯುವ ಉದ್ದೇಶ ಹಾಗೂ ಕೈಗಾರಿಕೆಗೆ ನೀರು ಮೀಸಲಿಟ್ಟರೂ ಸತತ 120 ದಿನ ನೀರು ಪೂರೈಸುವುದು ಕಷ್ಟವೇನಲ್ಲ. ಪ್ರಸ್ತುತ ಜಲಾಶಯದಲ್ಲಿ 182 ಅಡಿ ನೀರಿನ ಸಂಗ್ರಹವಿರುವುದರಿಂದ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆದರೂ ಬೆಳೆ ಮಾದರಿಯನ್ನು ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ನೀರಾವರಿ ಕಾಯ್ದೆ 1965ರ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಬೇರೆ ಬೆಳೆ ಬೆಳೆದು ನಷ್ಟ ಅನುಭವಿಸಿದರೆ ಅದಕ್ಕೆ ನೀರಾವರಿ ನಿಗಮ ಜವಾಬ್ದಾರಿಯಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.