ಶಿವಮೊಗ್ಗ ಲೈವ್.ಕಾಂ | SHIMOGA CITY NEWS | 17 ಜುಲೈ 2021
ಸ್ಮಾರ್ಟ್ ಸಿಟಿ ಗುಂಡಿಗಳು ಶಿವಮೊಗ್ಗದ ನಾಗರಿಕರ ಪಾಲಿಗೆ ಯಮ ಸ್ವರೂಪಿಯಾಗಿ ಕಾಡುತ್ತಿವೆ. ಎಲ್ಲೆಂದರಲ್ಲಿ ಗುಂಡಿ ತೆಗೆದಿರುವುದರಿಂದ ಜೀವ ಭಯದಲ್ಲೆ ಜನ ರಸ್ತೆಗಿಳಿಯುವಂತಾಗಿದೆ.
ಭಾರಿ ಮಳೆಯ ನಡುವೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ನಾಗರಿಕರ ವಿರೋಧ ವ್ಯಕ್ತವಾಗಿದೆ. ಈ ನಡುವೆ ರಸ್ತೆಗಳಲ್ಲಿ ಗುಂಡಿಗಳನ್ನು ತೋಡಿರುವುದು ವಾಹನ ಸವಾರರಿಗೆ ಕಂಟವಾಗಿದೆ.
ಗುಂಡಿಗೆ ಬಿದ್ದ ಬೈಕು
ಕುವೆಂಪು ರಸ್ತೆಯಲ್ಲಿ ಗುಂಡಿಗಳನ್ನು ತೋಡಿ, ಹಾಗೆ ಬಿಡಲಾಗಿದೆ. ಶುಕ್ರವಾರ ಈ ರಸ್ತೆಯಲ್ಲಿ ಬಂದ ಬೈಕ್ ಸವಾರರೊಬ್ಬರು, ಗುಂಡಿ ಗೊತ್ತಾಗದೆ ಬೈಕ್ ಸಹಿತ ಗುಂಡಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೆ ಸಮಸ್ಯೆಯಾಗಿಲ್ಲ. ಸ್ಥಳೀಯರು ಬೈಕ್ ಸವಾರನನ್ನು ಮೇಲೆತ್ತಿ ಆರೈಕೆ ಮಾಡಿದ್ದಾರೆ. ಸ್ಥಳೀಯರ ಆಕ್ರೋದ ಬಳಿಕ ಬ್ಯಾರಿಕೇಡ್ ಹಾಕಿ, ಟೇಪ್ ಕಟ್ಟಲಾಗಿದೆ.
ಗುಂಡಿಯಲ್ಲಿ ಸಿಕ್ಕಿಬಿದ್ದ ಕಾರು
ದುರ್ಗಿಗುಡಿಯಲ್ಲೂ ಕಾಮಗಾರಿ ನಡೆಯುತ್ತಿದೆ. ಶುಕ್ರವಾರ ಸಂಜೆ ದುರ್ಗಿಗುಡಿಯಲ್ಲಿ ಕಾರೊಂದು ಸ್ಮಾರ್ಟ್ ಸಿಟಿ ಗುಂಡಿಯಲ್ಲಿ ಸಿಕ್ಕಿಬಿದ್ದಿದೆ. ಸ್ಥಳೀಯರ ನೆರವಿನಿಂದ ಕಾರನ್ನು ಮೇಲೆತ್ತಲಾಯಿತು.
ಪ್ರಾಣಿಗಳ ಪಾಡು ಕೇಳೋರಿಲ್ಲ
ಸ್ಮಾರ್ಟ್ ಸಿಟಿ ಗುಂಡಿಗಳು ಪ್ರಾಣಿಗಳ ಪಾಲಿಗೆ ಅಕ್ಷರಶಃ ನರಕ ದರ್ಶನ ಮಾಡಿಸುತ್ತಿವೆ. ನಾಯಿಗಳು, ದನಕರು, ಹಂದಿಗಳು, ಕೋಳಿಗಳು ಕೂಡ ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಸಂಕಷ್ಟ ಅನುಭವಿಸುತ್ತಿವೆ. ಗುಂಡಿಗೆ ಬಿದ್ದ ಪ್ರಾಣಿಗಳನ್ನು ಸಾರ್ವಜನಿಕರೆ ಮೇಲೆತ್ತಿ ರಕ್ಷಣೆ ಮಾಡುತ್ತಿದ್ದಾರೆ.
ಕಾಮಗಾರಿಗಳಿಗೆ ಗುಂಡಿಗಳನ್ನು ತೆಗೆದರೆ ಬ್ಯಾರಿಕೇಡ್ ಹಾಕಬೇಕು. ಈ ಕುರಿತು ಸುಪ್ರೀಂ ಕೋಟ್ ಗೈಡ್ಲೈನ್ ಕೂಡ ಇದೆ. ಹಾಗಿದ್ದೂ ಎಲ್ಲೆಂದರಲ್ಲಿ ಗುಂಡಿಗಳನ್ನು ತೆಗೆದು ಬಿಡಲಾಗುತ್ತಿದೆ. ಇತ್ತ ಭಾರಿ ಮಳೆಯಾಗುವ ಸಂದರ್ಭ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200