ಶಿವಮೊಗ್ಗದ ಲೈವ್.ಕಾಂ | SHIMOGA NEWS | 8 ಫೆಬ್ರವರಿ 2022
ವಿವಾದದ ಕೇಂದ್ರವಾಗಿರುವುದು ಹಿಜಾಬ್, ಕೇಸರಿ ಶಾಲು ಅಲ್ಲ. ಇದು ನಾಡಿನ ಶಾಂತಿ ಕದಡುವ ಹುನ್ನಾರವಾಗಿದೆ. ವಾಟ್ಸಪ್ ಗ್ರೂಪ್’ಗಳಲ್ಲಿ ಮೆಸೇಜ್ ಮಾಡುವ ಮೂಲಕ ಪ್ರಚೋದನೆ ನೀಡಲಾಗಿದೆ. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್’ನಲ್ಲಿ ನಡೆದ ಚರ್ಚೆ ಇದಕ್ಕೆ ಸಾಕ್ಷಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್’ನಲ್ಲಿ ಪಾಕಿಸ್ತಾನದ ಧ್ವಜ ಮತ್ತು ಆ ದೇಶದ ಪರವಾಗಿ ಚರ್ಚೆ ನಡೆಸಿ ಉಳಿದ ವಿದ್ಯಾರ್ಥಿಗಳನ್ನು ಪ್ರಚೋದಿಸಲಾಗಿದೆ ಎಂದು ಆರೋಪಿಸಿದರು.
ಮೇಲ್ನೋಟಕ್ಕಷ್ಟೆ ಹಿಜಾಬ್, ಕೇಸರಿ ಶಾಲು
ಈ ವಿವಾದ ಮೇಲ್ನೋಟಕ್ಕಷ್ಟೆ ಇದು ಹಿಜಾಬ್, ಕೇಸರಿ ಶಾಲು ಎಂಬಂತೆ ಕಾಣುತ್ತಿದೆ. ಆದರೆ SDPI ಸಂಘಟನೆ ತನ್ನ ರಾಜಕೀಯ ಶಕ್ತಿ ವೃದ್ಧಿ ಮಾಡಿಕೊಳ್ಳುವ ದುರಾಲೋಚನೆಯಿಂದ ವಿವಾದ ಹುಟ್ಟಹಾಕಿದೆ ಎಂದು ಆರೋಪಿಸಿದ ಟಿ.ಡಿ.ಮೇಘರಾಜ್ ಅವರು, SDPI, ಪಿಎಫ್ಐ, ಸಿಎಫ್ಐ ಸಂಘಟನೆಗಳು ಪೂರ್ವಯೋಜಿತವಾಗಿ ವಿವಾದ ಸೃಷ್ಟಿಸಿವೆ. ಯಾವೆಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಈ ಬಗ್ಗೆ ಪಿತೂರಿ ನಡೆದಿದೆ ಎಂಬುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಒಂದು ಸಮುದಾಯದ ವ್ಯವಸ್ಥಿತ ಸಂಚು
ಇನ್ನು, ಇಡಿ ಘಟನೆಯಲ್ಲಿ ಒಂದು ಸಮುದಾಯ ವ್ಯವಸ್ಥಿತವಾಗಿ ಸಂಚು ರೂಪಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದರು. ಕಾಲೇಜು ಕಟ್ಟಡದ ಆಯಕಟ್ಟಿನ ಜಾಗದಲ್ಲಿ ಕಲ್ಲುಗಳ ಸಂಗ್ರಹ ಮಾಡಲಾಗಿತ್ತು. ಒಂದೇ ಸಮುದಾಯಕ್ಕೆ ಸೇರಿದವರು ಎರಡನೆ ಅಂತಸ್ತಿಗೆ ಹೋಗಿ ಸೇರಿಕೊಂಡಿದ್ದಾರೆ. ಅಲ್ಲಿಂದ ಕಲ್ಲು ತೂರಾಟ ಮಾಡಿದ್ದಾರೆ. ಇದು ಗಲಾಟೆ ಪೂರ್ವ ಯೋಜಿತ ಅನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ರಾಜ್ಯದ ಶಾಂತಿ ಕದಡಲು ನಡೆದಿರುವ ಹುನ್ನಾರ ಇದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ, ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಹಲವು ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ | ಶಿವಮೊಗ್ಗ ನಗರದಲ್ಲಿ ಎರಡು ದಿನ ನಿಷೇಧಾಜ್ಞೆ
ಇದನ್ನೂ ಓದಿ | ಶಿವಮೊಗ್ಗದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ತಾರಕಕ್ಕೆ, ಕಲ್ಲು ತೂರಾಟ, ಹಲವರ ಬಂಧನ
Shimoga District Profile | About Shivamogga Live | Shivamogga Live Whatsapp 7411700200