SHIVAMOGGA LIVE NEWS | 1 ಮಾರ್ಚ್ 2022
ಫೈನಾನ್ಸ್ ಸಂಸ್ಥೆಯೊಂದರ ಬ್ರಾಂಚ್ ಮ್ಯಾನೇಜರ್ ಒಬ್ಬರ ಲ್ಯಾಪ್ ಟಾಪ್ ಬ್ಯಾಗ್ ಮತ್ತು ದಾಖಲೆಗಳ ಕಳ್ಳತನವಾಗಿದೆ. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಘಟನೆ ಸಂಭವಿಸಿದೆ.
ವಿಶ್ವನಾಥ್ ಎಂಬುವವರು ತಮ್ಮ ಲ್ಯಾಪ್ ಟಾಪ್, ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದ್ದಾರೆ.
ಹೇಗಾಯ್ತು ಘಟನೆ?
ವಿಶ್ವನಾಥ್ ಅವರು ಡೆಪ್ಯುಟೇಷನ್ ಮೇಲೆ ಫೈನಾನ್ಸ್ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಿದ್ದರು. ದಾವಣಗೆರೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ತಾವು ಕುಳಿತಿದ್ದ ಸೀಟಿನ ಮೇಲೆ ಲಗೇಜ್ ಇರಿಸಲು ಇದ್ದ ಜಾಗದಲ್ಲಿ ಬ್ಯಾಗ್ ಇಟ್ಟಿದ್ದರು.
ಬಸ್ಸು ಬೆಳಗ್ಗೆ 10 ಗಂಟೆ ಹೊತ್ತಿಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದೆ. ಆಗ ನೋಡಿದಾಗ ಬ್ಯಾಗ್ ಇತ್ತು. ಕರ್ನಾಟಕ ಸಂಘ ಬಳಿ ಬಸ್ ಬಂದಾಗ ಲಗೇಜ್ ಜಾಗದಲ್ಲಿ ಬ್ಯಾಗ್ ಇರಲಿಲ್ಲ. ಹುಡುಕಾಡಿದರೂ ಸಿಗಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲ್ಯಾಪ್ ಟಾಪ್, ಎಟಿಎಂ, ಕೀಗಳು
ಬ್ಯಾಗ್’ನಲ್ಲಿ ಫೈನಾನ್ಸ್ ಸಂಸ್ಥೆಗೆ ಸೇರಿದ 50 ಸಾವಿರ ಮೌಲ್ಯದ ಲ್ಯಾಪ್ ಟಾಪ್ ಇತ್ತು. ಎಟಿಎಂ ಕಾರ್ಡುಗಳು, ವಿವಿಧ ದಾಖಲೆಗಳು, ಬ್ರಾಂಚ್’ನ ಕೀಗಳು ಕೂಡ ಇದ್ದವು.
ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.