ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟೆಂಬರ್ 2021
ಬೈಕ್’ನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಹೆದರಿಸಿದ ಯುವಕರು 20 ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಸಾಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ರಾಜು ಎಂಬುವವರು ಹಣ ಕಳೆದುಕೊಂಡಿದ್ದಾರೆ. ಬೈಕ್ ಕೀ ಹುಡುಕಲು ಹೋಗಿದ್ದಾಗ ಘಟನೆ ಸಂಭವಿಸಿದೆ.
ಏನಿದು ಪ್ರಕರಣ? ಹೇಗಾಯ್ತು ದರೋಡೆ?
ಗಾಡಿಕೊಪ್ಪ ನಿವಾಸಿ ರಾಜು ಅವರು ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಅವರ ಬೈಕ್’ನ ಕೀ ಬಿದ್ದು ಹೋಗಿತ್ತು. ಮನೆಗೆ ಬಂದಾಗ ಇದು ಗೊತ್ತಾಗಿದೆ.
ಮರುದಿನ ಬೆಳಗ್ಗೆ ರಾಜು ಅವರು ಕೀ ಹುಡುಕುತ್ತಾ ಹೊರಟಿದ್ದರು. ಗಾಡಿಕೊಪ್ಪದ ಬಳಿ ಸಾಗರ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಒಂದನ್ನು ನಿಲ್ಲಿಸಿ, ಕುವೆಂಪು ರಸ್ತೆವರೆಗೂ ಡ್ರಾಪ್ ಕೊಡುವಂತೆ ರಾಜು ಅವರು ಮನವಿ ಮಾಡಿದರು. ಬೈಕ್’ನಲ್ಲಿ ಇಬ್ಬರು ಯುವಕರಿದ್ದರು. ರಾಜು ಅವರನ್ನು ಕೂರಿಸಿಕೊಂಡ ಸವಾರರು, ಹೆವನ್ ಇನ್ ಬಾರ್ ಪಕ್ಕದ ರಸ್ತೆಯಲ್ಲಿ ಕರೆದೊಯ್ದು ಬೈಕ್ ನಿಲ್ಲಿಸಿ, ಜೇಬಿನಲ್ಲಿರುವ ಹಣ ಕೊಡುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜು ಅವರ ಜೇಬಿನಲ್ಲಿ 20 ಸಾವಿರ ರೂ. ನಗದು ಇತ್ತು. ಅದನ್ನು ಕಿತ್ತುಕೊಂಡು ಯುವಕರು ಬೈಕ್’ನಲ್ಲಿ ಪರಾರಿಯಾಗಿದ್ದಾರೆ. ಡ್ರಾಪ್ ಕೊಡುವ ನೆಪದಲ್ಲಿ ಹಣ ಕಿತ್ತು ಪರಾರಿಯಾದವರ ವಿರುದ್ಧ ರಾಜು ಅವರು ದೂರು ನೀಡಿದ್ದಾರೆ.
ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200