ಶಿವಮೊಗ್ಗ ಲೈವ್.ಕಾಂ | SHIKARIPURA NEWS | 14 ಜೂನ್ 2020
ಜಮೀನು ವಿಚಾರವಾಗಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ವಿಜ್ಞಾನಿ, ಎಂಜಿನಿಯರ್ ಮತ್ತು ಟೀಚರ್ ವಿರುದ್ಧ ಕೇಸ್ ದಾಖಲಾಗಿದೆ.
ಶಿಕಾರಿಪುರ ತಾಲೂಕು ಕಾಗಿನೆಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಗಿನೆಲ್ಲಿ ಗ್ರಾಮದ ಸುಶೀಲಮ್ಮ(43) ವಿಷ ಸೇವಿಸಿ ಮೃತರಾಗಿದ್ದಾರೆ. ಸುಶೀಲಮ್ಮ ಅವರು ಶನಿವಾರ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಶೀಲಮ್ಮ ಮೃತರಾಗಿದ್ದಾರೆ.
ಆತ್ಮಹತ್ಯೆಗೆ ಕಾರಣ ಏನು?
ಜಮೀನು ವಿಚಾರವಾಗಿ ಸುಶೀಲಮ್ಮ ಅವರ ಪತಿ ಚಂದ್ರಪ್ಪ ಮತ್ತು ಮೈದುನರ ನಡುವೆ ಜಗಳವಾಗುತ್ತಿತ್ತು. ಶನಿವಾರವು ಮೈದುನರು ಬಂದು ಚಂದ್ರಪ್ಪ ಮತ್ತು ಸುಶೀಲಮ್ಮ ಅವರೊಂದಿಗೆ ಜಗಳವಾಡಿದ್ದರು. ನಿಮ್ಮ ಕಿರುಕುಳದಿಂದ ಬೇಸತ್ತು ವಿಷ ಸೇವಿಸುವುದಾಗಿ ಸುಶೀಲಮ್ಮ ಬೆದರಿಸಿದ್ದರು. ಈ ವೇಳೆ ವಿಷ ಕುಡಿಯುವಂತೆ ಮೈದುನರು ಪ್ರಚೋದನೆ ನೀಡಿದ್ದಾರೆ. ಹಾಗಾಗಿ ಸುಶೀಲಮ್ಮ ವಿಷ ಸೇವಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ವಿಜ್ಞಾನಿ, ಎಂಜಿನಿಯರ್, ಟೀಚರ್ ವಿರುದ್ಧ ಕೇಸ್
ಆತ್ಮಹತ್ಯೆ ಪ್ರಚೋದನೆ ನೀಡಿದ ಸಂಬಂಧ ಸುಶೀಲಮ್ಮ ಅವರ ಮೂವರು ಮೈದುನರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ ಒಬ್ಬ ಮೈದುನ ವಿಜ್ಞಾನಿ, ಮತ್ತೊಬ್ಬರು ಎಂಜಿನಿಯರ್, ಇನ್ನೊಬ್ಬರು ಟೀಚರ್. ಇವರ ವಿರುದ್ಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು ತನಿಖೆ ನಡೆಯುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]