ಶಿವಮೊಗ್ಗ ಲೈವ್.ಕಾಂ | SHIMOGA NEWS | 24 MARCH 2021
ದೆಹಲಿಯಲ್ಲಿ ರೈತರ ಆಂದೋಲನದ ನೇತೃತ್ವವ ವಹಿಸಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಹಿನ್ನೆಲೆ ಪೊಲೀಸರು ಸುಮೋಟೊ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ | ಸೈನ್ಸ್ ಮೈದಾನದಲ್ಲಿ ದಕ್ಷಿಣ ಭಾರತದ ಮೊದಲ ಮಹಾ ಪಂಚಾಯತ್, ಹರಿದು ಬಂತು ರೈತ ಸಾಗರ
ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆದ ರೈತ ಮಹಾಪಂಚಾಯತ್ ಸಮಾವೇಶದಲ್ಲಿ ರಾಕೇಶ್ ಟಿಕಾಯತ್ ಪಾಲ್ಗೊಂಡಿದ್ದರು. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿಕೊಳ್ಳಲಾಗಿದೆ.
ಯಾವ ಹೇಳಿಕೆ ವಿರುದ್ಧ ಪ್ರಕರಣ?
ರಾಕೇಶ್ ಟಿಕಾಯತ್ ಅವರು ತಮ್ಮ ಭಾಷಣದಲ್ಲಿ, ಈ ಆಂದೋಲನವು ದೊಡ್ಡಮಟ್ಟದಲ್ಲಿ ಸಾಗಬೇಕಿದೆ. ನೀವು ಕರ್ನಾಟಕದ ಒಳಗಡೆ ದೆಹಲಿ ಮಾಡಬೇಕಿದೆ. ನೀವು ಬೆಂಗಳೂರನ್ನು ದೆಹಲಿ ಮಾಡಬೇಕಿದೆ. ಬೆಂಗಳೂರನ್ನು ನಾಲ್ಕು ಕಡೆಯಿಂದ ಮುತ್ತಿಗೆ ಹಾಕಬೇಕಿದೆ. ಈ ಆಂದೋಲನವು ಟ್ರಾಕ್ಟರ್ಗಳಿಂದ ಆಗುತ್ತದೆಯೇ ವಿನಃ ಗಾಡಿಗಳಿಂದ ಅಲ್ಲ. ದೆಹಲಿಯಲ್ಲಿ ಈಗ ಸುಮಾರು 25-30 ಸಾವಿರ ಟ್ರಾಕ್ಟರ್ಗಳು ನಾಲ್ಕು ದಿಕ್ಕುಗಳಲ್ಲಿ ಇವೆ. ನೀವು ಸಹ ಟ್ರಾಕ್ಟರ್ಗಳಿಂದ ಆಂದೋಲನ ಮಾಡಬೇಕಿದೆ ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ರೀತಿಯಲ್ಲೇ ಪ್ರೇರೇಪಿಸುವ ಮಾದರಿಯಲ್ಲಿ ರಾಕೇಶ್ ಟಿಕಾಯತ್ ಅವರು ಭಾಷಣದಲ್ಲಿ ಪ್ರಚೋದಿಸಿದ್ದಾರೆ. ಈ ಭಾಷಣದಿಂದ ಸಾರ್ವಜನಿಕರು ಉದ್ರೇಕಗೊಂಡು ದೊಂಬಿ ನಡೆಸುವ ಸಾಧ್ಯತೆ ಇದ್ದು, ಉದ್ದೇಶಪೂರ್ವಕವಾಗಿ ಈ ರೀತಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಕೋಟೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]