ಶಿವಮೊಗ್ಗ ಲೈವ್.ಕಾಂ | BHADRAVATHI NEWS | 25 JUNE 2021
ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭದ್ರಾ ಜಲಾಶಯದ ಮುಂದೆ ರೈತರು ಇವತ್ತು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ಭದ್ರಾ ಜಲಾಶಯದ ಮುಂದೆ ನೀರು ಬೀಳುವ ಜಾಗದಲ್ಲಿ ಸಿಮೆಂಟ್ ಬೆಡ್ ಹಾಕಲಾಗಿತ್ತು. ಆದರೆ ಈ ಕಾಮಗಾರಿ ಕಳಪೆಯಾಗಿದ್ದರಿಂದ ಸಿಮೆಂಟ್ ಬೆಡ್ ಹಾಳಾಗಿತ್ತು. ಈಗ ಮತ್ತೊಮ್ಮೆ ಕಾಮಗಾರಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ರೈತರು ಆರೋಪಿಸಿದರು.
2017ರಲ್ಲಿ ಭದ್ರಾ ಜಲಾಶಯದ ಮುಂದೆ ಸಿಮೆಂಟ್ ಬೆಡ್ ಹಾಕಲಾಗಿತ್ತು. ಇದಕ್ಕಾಗಿ ಏಳು ಕೋಟಿ ರೂ. ಖರ್ಚು ಮಾಡಲಾಗಿದೆ. 2019ರಲ್ಲಿ ಜಲಾಶಯ ಭರ್ತಿಯಾಗಿ ನೀರು ಬಿಟ್ಟಾಗ ಸಿಮೆಂಟ್ ಬೆಡ್ ಕಿತ್ತು ಹೋಗಿದೆ. ಜಲಾಶಯ ನಿರ್ಮಾಣದ ವೇಳೆ ಹಾಕಿದ್ದ ಸಿಮೆಂಟ್ ಬೆಡ್ ಇನ್ನೂ ಗಟ್ಟಿಯಾಗಿದೆ. ಅದರ ಮೇಲೆ ಹಾಕಿದ ಬೆಡ್ ಎರಡೆ ವರ್ಷಕ್ಕೆ ಹಾಳಾಗಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.
ರೈತರ ಹೋರಾಟಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದರು. ಜಲಾಶಯಕ್ಕೆ ಹಾನಿಯಾದರೆ ಈ ಭಾಗದ ಜನರು ಮತ್ತು ಅಚ್ಚುಕಟ್ಟು ವ್ಯಾಪ್ತಿಯ ರೈತರ ಭವಿಷ್ಯಕ್ಕೆ ಸಂಕಷ್ಟ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ಶಿವಮೊಗ್ಗ ಲೈವ್ನ ನಮ್ಮೂರ ನ್ಯೂಸ್ – ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭಗಳು ಸೇರಿದಂತೆ ಸುದ್ದಿಯಾಗುವ ಸಂಗತಿಗಳಿದ್ದರೆ ವಾಟ್ಸಪ್ ಮಾಡಿ. ನಿಮ್ಮೂರ ಸುದ್ದಿ ಜಿಲ್ಲೆಯ ಜನಕ್ಕೆ ತಲುಪಲಿ.)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]