ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಸೆಪ್ಟೆಂಬರ್ 2021
ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ವ್ಯಕ್ತಿಯೊಬ್ಬರ ಕೊರಳಲ್ಲಿದ್ದ ಸರವನ್ನು ಕಳ್ಳರು ಕಿತ್ತೊಯ್ದಿದ್ದಾರೆ. ಕಟ್ಟಡವೊಂದರ ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಇದು ಬಡಾವಣೆಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ನಿವೃತ್ತ ನೌಕರ ಕೃಷ್ಣಮೂರ್ತಿ ಅವರು ಸೈಕಲ್’ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಬೈಕ್’ನಲ್ಲಿ ಬಂದ ಇಬ್ಬರು ಯುವಕರು, ಕೃಷ್ಣಮೂರ್ತಿ ಅವರನ್ನು ನಿಲ್ಲಿಸಿ ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆ ಸೆಳೆದಿದ್ದಾರೆ.
ಕೃಷ್ಣಮೂರ್ತಿ ಅವರು ವಿಳಾಸದ ಕುರಿತು ಯೋಚಿಸುತ್ತಿದ್ದಾಗ ಅವರ ಕೊರಳಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಂಡು ಯುವಕರು ಪರಾರಿಯಾಗಿದ್ದಾರೆ. ಕೃಷ್ಣಮೂರ್ತಿ ಅವರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಆದರೆ ಬೈಕ್’ನಲ್ಲಿದ್ದ ಕಳ್ಳರು ಪರಾರಿಯಾಗಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಿಂಚಿನ ವೇಗದಲ್ಲಿ ಹರಡಿದ ಸುದ್ದಿ
ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಬಳಿ ಘಟನೆ ಸಂಭವಿಸಿದೆ. ಕೃಷ್ಣಮೂರ್ತಿ ಅವರ ಚಿನ್ನದ ಸರ ಕಳ್ಳತನವಾದ ವಿಚಾರ ಬಡಾವಣೆಯಲ್ಲಿ ಮಿಂಚಿನ ವೇಗದಲ್ಲಿ ಹರಡಿದೆ. ನಿವಾಸಿಗಳು ಒಗ್ಗೂಡಿ ತಮ್ಮ ಬಡಾವಣೆಯ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಭದ್ರತೆಗಾಗಿ ಆಗ್ರಹಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ
ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳಲ್ಲಿ ಕಳ್ಳರು, ದರೋಡೆಕೋರರ ಹಾವಳಿ ಹೆಚ್ಚಾಗಿದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ವಾಕಿಂಗ್’ಗೆ ಹೆಚ್ಚಿನ ಜನರು ಮನೆಯಿಂದ ಹೊರಗೆ ಬರುತ್ತಾರೆ. ಈ ಸಂದರ್ಭದಲ್ಲಿ ಹಲ್ಲೆ ಮಾಡಿ, ದರೋಡೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಮನೆಗಳ ಕಳ್ಳತನ, ಗಾಂಜಾ ಹಾವಳಿ ಕೂಡ ಹೆಚ್ಚಳವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಕಳ್ಳರ ಹೆಡೆಮುರಿ ಕಟ್ಟಬೇಕು ಅಂತಾ ನಿವಾಸಿಗಳ ಸಂಘ ಒತ್ತಾಯಿಸಿದೆ.
ಸಮಸ್ಯೆ ಇದೆ ಮೊದಲಲ್ಲ
ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳಲ್ಲಿ ಸಾಮಾನ್ಯ ಸಂದರ್ಭದಲ್ಲೂ ಜನ ಸಂಚಾರ ಕಡಿಮೆ. ಇದೆ ಕಾರಣಕ್ಕೆ ಕಳ್ಳರು ಈ ಬಡಾವಣೆಗಳನ್ನು ಗುರಿಯಾಗಿಸಿಕೊಂಡು ಕೃತ್ಯೆ ಎಸಗುತ್ತಿದ್ದಾರೆ.
ಜನರು ಮನೆಯಿಂದ ಹೊರಗೆ ಬರಲು ಹೆದರುವ ಸ್ಥಿತಿ ಇದೆ. ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡಲಾಗುತ್ತಿದೆ. ಇತ್ತೀಚೆಗೆ ಇನ್ಸ್’ಪೆಕ್ಟರ್ ಒಬ್ಬರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ | ಇನ್ಸ್’ಪೆಕ್ಟರ್ ಮನೆಯ ಬಾಗಿಲು ಒಡೆದು ಹಣ, ಚಿನ್ನದ ನಾಣ್ಯ ಕಳ್ಳತನ
ಈ ಬಡಾವಣೆಗಳಲ್ಲಿ ಇರುವ ಪಾರ್ಕುಗಳು ಅಕ್ರಮ ಚಟುವಟಿಕೆಯ ತಾಣಗಳಾಗಿವೆ. ಪಾರ್ಕುಗಳಲ್ಲಿ ಗಾಂಜಾ ಸೇವನೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಅಲ್ಲದೆ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದು ಕೂಡ ಕಳ್ಳರಿಗೆ ವರದಾನವಾಗಿದೆ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.
ದುಬಾರಿ ಚಪ್ಪಲಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು
ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಈ ಹಿಂದೆ ದುಬಾರಿ ಚಪ್ಪಲಿಗಳ ಕಳವು ಮಾಡಲಾಗುತ್ತಿತ್ತು. ರಾತ್ರಿ ವೇಳೆ ಬಡಾವಣೆಗೆ ನುಗ್ಗುತ್ತಿದ್ದ ಗ್ಯಾಂಗ್ ಚಪ್ಪಲಿಗಳು, ಶೂಗಳನ್ನು ಕದ್ದೊಯ್ಯುತ್ತಿದ್ದರು. ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಶಿವಮೊಗ್ಗ ಲೈವ್.ಕಾಂ ಕೂಡ ಈ ಕುರಿತು ವರದಿ ಮಾಡಿತ್ತು.
ಇದನ್ನೂ ಓದಿ | ಬೆಳಗ್ಗೆ ಏಳುವಷ್ಟರಲ್ಲಿ ಶೂ, ಚಪ್ಪಲಿ ಮಾಯ, ಈ ಜನರ ಗೋಳು ಕೇಳೋಕೆ ಯಾರೂ ಇಲ್ವಾ? ಏನಿದು? ಯಾಕಿಂಗೆ ಆಗ್ತಿದೆ?
ಬಡಾವಣೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕಿದೆ ಎಂಬುದು ಸ್ಥಳೀಯರ ವಾದ. ಅಲ್ಲದೆ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಸುವಂತಾದರೆ ಜನರು ನಿಶ್ಚಿಂತೆಯಿಂದ ಬದುಕುವಂತಾಗುತ್ತದೆ ಅನ್ನುತ್ತಾರೆ ನಿವಾಸಿಗಳು. ಈಗಲಾದರೂ ನಿವಾಸಿಗಳ ಸಮಸ್ಯೆಯಂತೆ ಆಡಳಿತ ಯಂತ್ರ ಗಮನವಹಿಸುತ್ತದೆಯೆ ನೋಡಬೇಕಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200