SHIVAMOGGA LIVE | 3 JUNE 2023
SHIMOGA : ಚರಕ ಸಂಸ್ಥೆಗೆ (charaka) ಸರ್ಕಾರ ಬಿಡುಗಡೆ ಮಾಡಿರುವ ಯೋಜನೆಯೊಂದರ ಹಣದಲ್ಲಿ ಅಧಿಕಾರಿಗಳು ಶೇ.40ರಷ್ಟು ಕಮಿಷನ್ಗೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಕೈ ಮಗ್ಗ ಮತ್ತು ಜವಳಿ ಇಲಾಖೆಯ ನೀತಿ, ನಿಯಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಚರಕ ಪ್ರಸನ್ನ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿದರು. 40 ಪರ್ಸೆಂಟ್ ವ್ಯವಸ್ಥೆ ಬೇಡ ಎಂದು ಭಿತ್ತಿ ಪತ್ರ ಹಿಡಿದು ಘೋಷಣೆ ಕೂಗಿದರು.
WATCH VIDEO | ADVT
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಏನಿದು 40 ಪರ್ಸೆಂಟ್ ಕೇಸ್?
ಈ ಹಿಂದೆ ರಾಜ್ಯ ಸರ್ಕಾರ ಚರಕ (charaka) ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದೊಂದಿಗೆ ಪಿಪಿಪಿ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಂಡಿತ್ತು. ಯೋಜನೆ ಮುಗಿದು ವರ್ಷಗಳೆ ಕಳೆದರೂ ಸರ್ಕಾರದಿಂದ ಹಣ ಸಂದಾಯವಾಗಿಲ್ಲ. ಈ ಹಣ ಕೇಳಿದಾಗ ಕುಪಿತರಾದ ಅಧಿಕಾರಿಗಳು ಪವಿತ್ರ ವಸ್ತ್ರ ಎಂಬ ಯೋಜನೆಯನ್ನೆ ರದ್ದುಗೊಳಿಸಿದರು ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಇನ್ನು, ಸರ್ಕಾರ ಬಿಡುಗಡೆ ಮಾಡಿರುವ 90 ಲಕ್ಷ ರೂ. ಹಣವನ್ನು ಜಂಟಿ ಖಾತೆಯಲ್ಲಿ ಇರಿಸಿಕೊಂಡು ಫಲಾನುಭವಿಗಳಿಗೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಈ ವ್ಯವಸ್ಥೆಯಿಂದಾಗಿ ರಾಜ್ಯದ ಕೈಮಗ್ಗ ಸಹಕಾರ ಸಂಘಗಳು ನೆಲಕಚ್ಚಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಹಿನ್ನೆಲೆ ಕೈಮಗ್ಗ ಮತ್ತು ಜವಳಿ ಇಲಾಖೆಯ ನೀತಿ, ನಿಯಮಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಮಹಿಳೆಯರು ಆಗ್ರಹಿಸಿದರು.
ಯಾರೆಲ್ಲ ಏನೇನು ಹೇಳಿದರು?
ಖಾಸಗಿ ಬ್ಯಾಂಕ್ ಖಾತೆಗೆ ಹಣ ಜಮೆ
ಪವಿತ್ರ ವಸ್ತ್ರ ಯೋಜನೆಗಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆ ಹಣ ಅಧಿಕಾರಿಗಳ ಖಾಸಗಿ ಬ್ಯಾಂಕ್ ಖಾತೆಗೆ ಜಮಾವಣೆಯಾಗಿದೆ. ಹಣ ಬಿಡುಗಡೆ ಮಾಡುವಂತೆ ಶಿವಮೊಗ್ಗಕ್ಕೆ ನೂರಾರು ಬಾರಿ ಅಲೆದರು ಪ್ರಯೋಜನವಾಗಲಿಲ್ಲ. ಲಂಚ ಕೊಡದಿದ್ದಕ್ಕೆ ಹೀಗಾಗಿದೆ. ಇದೆ ಕಾರಣಕ್ಕೆ ಮಹಿಳೆಯರು ಈ ಹಣವೆ ನಮಗೆ ಬೇಡ ಎಂದು ಘೋಷಿಸಿದರು. ಆಗ ಆ ಅಧಿಕಾರಿ ಯೋಜನೆಯನ್ನೆ ರದ್ದುಗೊಳಿಸಿದ್ದಾರೆ.
– ಪ್ರಸನ್ನ, ಚರಕ ಸಂಸ್ಥಾಪಕ
ಈ ವ್ಯವಸ್ಥೆ ತೊಲಗಿಸಿ ಅನುಕೂಲ ಮಾಡಿಕೊಡಿ
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಪವಿತ ವಸ್ತ್ರ ಅಭಿಯಾನ ಯೋಜನೆ ಜಾರಿ ಮಾಡಿದ್ದರು. ಆದರೆ ಕೆಲವು ಅಧಿಕಾರಿಗಳು ನಮಗೆ ಅನುದಾನ ತಲುಪಲು ಬಿಡುತ್ತಿಲ್ಲ. ಈ ಹಿನ್ನೆಲೆ ಕೈ ಮಗ್ಗ ಮತ್ತು ಜವಳಿ ಇಲಾಖೆಯ ನೀತಿ, ನಿಯಮಗಳ ಕುರಿತು ತನಿಖೆ ಮಾಡಬೇಕು. ಈ ವ್ಯವಸ್ಥೆ ತೊಲಗಿಸಿ ನೇಕಾರ ವರ್ಗಕ್ಕೆ ಅನುಕೂಲವಾಗಬೇಕು. ಕಳೆದ ಎರಡು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ.
– ಪ್ರತಿಭಾ ಸಾಗರ, ಚರಕ ಸಂಸ್ಥೆ ಗೌರವ ಕಾರ್ಯದರ್ಶಿ
ಇದನ್ನೂ ಓದಿ – 33 ಲಕ್ಷ ರೂ. ಸರ್ಕಾರದ ನೆರವು ತಿರಸ್ಕರಿಸಿ ಸಾಹಸಕ್ಕೆ ಕೈ ಹಾಕಿದ ಚರಕದ ಮಹಿಳೆಯರು
40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ
ಚರಕ ಸಂಸ್ಥೆಗೆ 96 ಲಕ್ಷ ರೂ. ಹಣ ಬಂದಿಲ್ಲ. ಇದನ್ನು ಕೇಳಿದರೆ 40 ಪರ್ಸೆಂಟ್ ಕಮಿಷನ್ ಕೊಡಬೇಕು ಎನ್ನುತ್ತಿದ್ದಾರೆ. ಕಳೆದ 8 ವರ್ಷದಿಂದ ಪವಿತ್ರ ವಸ್ತ್ರ ಯೋಜನೆಗಾಗಿ ಕೆಲಸ ಮಾಡಿದ್ದೇವೆ. ಯೋಜನೆ ಪೂರ್ಣಗೊಂಡಿದೆ. ಆದರೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ನಮಗೆ ನ್ಯಾಯ ಒದಗಿಸಬೇಕು.
– ಗೌರಮ್ಮ, ಅಧ್ಯಕ್ಷೆ, ಚರಕ ಸಂಘ
ಇದನ್ನೂ ಓದಿ – ಮೂವರು ಸಿಎಂಗಳು ಹಣ ಬಿಡುಗಡೆ ಮಾಡಿಲ್ಲ, ಚರಕ ಬಂದ್ ಆಗಲು ಸರ್ಕಾರದ ಇಚ್ಛಾಶಕ್ತಿ ಕೊರತೆಯೇ ಕಾರಣ
ತನಿಖೆಯ ಭರವಸೆ ನೀಡಿದ ಡಿಸಿ
ಇನ್ನು, ಚರಕ ಸಂಸ್ಥೆಗೆ ಹಣ ಬಿಡುಗಡೆ ವಿಳಂಬ ಆಗಿರುವ ಕುರಿತು ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಭರವಸೆ ನೀಡಿದರು. ಕೆಎಎಸ್ ಅಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಸೂಚಿಸುತ್ತೇನೆ. ಹಣ ಬಿಡುಗಡೆ ವಿಳಂಬವಾಗಲು ಕಾರಣವೇನು ಎಂಬುದು ಸ್ಪಷ್ಟವಾಗಲಿದೆ. ಬೇಕಂತಲೆ ಹಣ ಬಿಡುಗಡೆ ವಿಳಂಬವಾಗಿದ್ದರೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?