SHIVAMOGGA LIVE NEWS | 7 DECEMBER 2022
ಶಿವಮೊಗ್ಗ : ಕಾಡು ಪ್ರಾಣಿಗಳ ಬೇಟೆಗೆ (hunters) ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಒದ್ದಾಡಿ ಪ್ರಾಣ ಬಿಟ್ಟಿದೆ. ಮೃತ ಚಿರತೆಯು 5 ರಿಂದ 6 ವರ್ಷದ್ದಾಗಿದೆ ಎಂದು ಅಂದಾಜಿಸಲಾಗಿದೆ.
ತಾಲೂಕಿನ ಕೋಣೆಹೊಸೂರು ಗ್ರಾಮದ ಕಿರು ಅರಣ್ಯ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಆಹಾರ ಅರಸುತ್ತ ಬಂದ ಚಿರತೆ ಉರುಳಿಗೆ ಸಿಕ್ಕಿಬಿದ್ದಿದೆ. ಅದರಿಂದ ಬಿಡಿಸಿಕೊಳ್ಳಲು ಬಹು ಹೊತ್ತು ಒದ್ದಾಡಿ ಪ್ರಾಣ ಬಿಟ್ಟಿದೆ.
hunters
ಮರದಲ್ಲಿ ಜೋತಾಡುತ್ತಿದ್ದ ಚಿರತೆ
ಉರುಳಿಗೆ ಸಿಲುಕಿದ ಚಿರತೆ ತಲೆ ಕೆಳಗಾದ ಸ್ಥಿತಿಯಲ್ಲಿ ಮರದಲ್ಲಿ ಜೋತಾಡುತ್ತಿತ್ತು. ಮರವನ್ನು ಹತ್ತಲಾಗದೆ. ಉರುಳಿನಿಂದ ತಪ್ಪಿಸಿಕೊಂಡು ಕೆಳಗೆ ಜಗಿಯಲು ಆಗದೆ ಪರಿತಪಿಸಿದೆ. ಅಲ್ಲದೆ ಕೆಲವು ಹೊತ್ತು ಉರುಳಿನಿಂದ ಬಿಡಿಸಿಕೊಳ್ಳಲು ಯತ್ನಿಸಿದೆ. ಪ್ರಯತ್ನ ಸಫಲವಾಗದೆ ಮರದಲ್ಲಿ ಜೋತಾಡುತ್ತಲೆ ಪ್ರಾಣ ಬಿಟ್ಟಿದೆ.
hunters
ಅರಣ್ಯಾಧಿಕಾರಿಗಳು ದೌಡು
ಚಿರತೆಯೊಂದು ಉರುಳಿಗೆ ಸಿಕ್ಕಿಬಿದ್ದಿದೆ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಚಿರತೆ ಪ್ರಾಣ ಬಿಟ್ಟಿದೆ. ಈ ಹಿನ್ನೆಲೆ ಕಾಡಿನಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದರು. ಅಲ್ಲಿಯೇ ದಹನ ಮಾಡಿದರು.
ಬೇಟೆಗಾರರ ಹಾವಳಿ ಹೆಚ್ಚು
ಈ ಭಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ವನ್ಯಜೀವಿಗಳ ಬೇಟೆಯಾಡಲಾಗುತ್ತಿದೆ ಎಂಬ ಆರೋಪವಿದೆ. ಬಂದೂಕಿನಿಂದ ಗುಂಡು ಹಾರಿಸಿದರೆ ಶಬ್ದ ಕೇಳುತ್ತದೆ. ಹಾಗಾಗಿ ಯಾರಿಗೂ ಗೊತ್ತಾಗದಂತೆ ಬೇಟೆಯಾಡಲು ಉರುಳು ಕಟ್ಟಲಾಗುತ್ತದೆ. ಪ್ರಾಣಿಗಳು ಸಾಮಾನ್ಯವಾಗಿ ಸಂಚರಿಸುವ ಜಾಗದಲ್ಲಿ ಉರುಳು ಕಟ್ಟುತ್ತಾರೆ. ಕಾಡು ಹಂದಿ ಸೇರಿದಂತೆ ವಿವಿಧ ವನ್ಯಜೀವಿಗಳು ಈ ಉರುಳಿಸಿಗೆ ಸಿಲುಕಿ ಸಾವನ್ನಪ್ಪುತ್ತವೆ. ಚಿರತೆ ಸಾವನ್ನಪ್ಪಿರುವುದರಿಂದ ಬೇಟೆಗಾರರ ಉರುಳು ತಂತ್ರ ಗೊತ್ತಾಗಿದೆ.
ಸಾಗರ ಎಸಿಎಫ್ ಶ್ರೀಧರ್, ವಲಯ ಅರಣ್ಯಾಧಿಕಾರಿ ಅರವಿಂದ್, ಡಿ.ವೈ.ಆರ್.ಎಫ್.ಒ ದೀಪಕ್ ಸಿಂಗ್, ಸೋಮಶೇಖರ್, ಅಶೋಕ್, ಮುಬಾರಕ್ ಬಾಷಾ, ಗಾರ್ಡ್ ಗಳಾದ ಬಸವರಾಜ, ಮಂಜನಾಥ್ ಮಲ್ಲಾದೊರೆ, ಗ್ರಾಮ ಪಂಚಾಯಿತಿ ಸದಸ್ಯ ಸುದರ್ಶನ ಹಾಜರಿದ್ದರು.
ಇದನ್ನೂ ಓದಿ – ಮತ್ತೆ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ಚಳಿ ಪ್ರಮಾಣವು ಹೆಚ್ಚಳ