ಶಿವಮೊಗ್ಗ ಲೈವ್.ಕಾಂ | SHIMOGA | 4 ಫೆಬ್ರವರಿ 2020
ಈ ಬಾರಿ ಕೇಂದ್ರ ಸರ್ಕಾರ ಅತ್ಯಂತ ಕಳಪೆ ಬಜೆಟ್ ಮಂಡಿಸಿದೆ. ಬಿಜೆಪಿಯ ಪ್ರಣಾಳಿಕೆಗೂ ಬಜೆಟ್ ಘೋಷಣೆಗು ಸಂಬಂಧವೇ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರೇಶ್ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅರ್ಥ ವ್ಯವಸ್ಥೆ ಕುರಿತು ಏನೇನು ಅರ್ಥವಾಗುತ್ತಿಲ್ಲ. ಈ ಬಾರಿಯ ಬಜೆಟ್’ನಲ್ಲಿ ಮಹಿಳೆಯರು, ಯುವಕರು, ರೈತರಿಗೆ ಉಪಯುಕ್ತವಾದ ಯಾವುದೇ ಯೋಜನೆಯನ್ನು ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಕಪ್ಪು ಹಣ ವಶಕ್ಕೆ ಪಡೆದು ಜನರ ಖಾತೆಗೆ 15 ಲಕ್ಷ ರೂ. ಹಣ ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗು ಎಷ್ಟು ಕಪ್ಪು ಹಣ ವಶಕ್ಕೆ ಪಡೆಯಲಾಗಿದೆ ಅನ್ನುವುದು ತಿಳಿಸಿಲ್ಲ. 45 ವರ್ಷದಲ್ಲಿ ಅತ್ಯಧಿಕ ಪ್ರಮಾಣದ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಕೈಗಾರಿಕೆಗಳು ಬಂದ್ ಆಗುತ್ತಿವೆ. ಇವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಬದಲು, ಹೊಸ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ ಎಂದು ಸುಳ್ಳು ಹೇಳಲಾಗುತ್ತಿದೆ ಎಂದು ಅಪಾದಿಸಿದರು.
ಭೀಕರ ಪ್ರವಾಹ, ಬರದಿಂದಾಗಿ ಆಸ್ತಿಪಾಸ್ತಿ, ಬೆಳೆ ಹಾನಿ ಸಂಭವಿಸಿದೆ. ಆದರೆ ರೈತರಿಗೆ ಅನುಕೂಲ ಮಾಡಿಕೊಡುವ ಬದಲು, ಕಿಸಾನ್ ಉಡಾನ್ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಈ ಯೋಜನೆ ಸ್ವರೂಪ ಗಮನಿಸಿದರೆ, ಸದ್ಯಕ್ಕಂತು ಅದು ಜಾರಿಯಾಗುವ ಲಕ್ಷಣ ಕಾಣುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ ಬದಲು, ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿದ್ದಾರೆ. ಇದು ಅಂಬಾನಿ ಕಂಪನಿಗೆ ಅನುಕೂಲ ಮಾಡಿಕೊಡುವ ಯೋಜನೆಯಾಗಿದೆ ಎಂದರು.
ಇನ್ನು, ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯ, ಕಳಪೆ ಬಜೆಟ್ ಕುರಿತು ಹಳ್ಳಿ ಹಳ್ಳಿಯಲ್ಲೂ ಜಾಗೃತಿ ಮೂಡಿಸಲಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಪ್ರಸನ್ನಕುಮಾರ್, ವಿಶ್ವನಾಥ್ ಕಾಶಿ, ಕಾರ್ಪೊರೇಟರ್ ಯಮುನಾ ರಂಗೇಗೌಡ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]