ಶಿವಮೊಗ್ಗ ಲೈವ್.ಕಾಂ | 20 ಮೇ 2019
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅವಮಾನ ಮಾಡಿದ ಬಿಜೆಪಿಯ ಸಾಧ್ವಿ ಪ್ರಜ್ಞಾಸಿಂಗ್, ಸಂಸದರಾದ ಅನಂತ ಕುಮಾರ್ ಹೆಗ್ಡೆ, ನಳೀನ್ ಕುಮಾರ್ ಅವರ ವಿರುದ್ಧ ರಾಷ್ಟ್ರದ್ರೋಹದ ಕೇಸ್ ದಾಖಲಿಸಿ, ಬಂಧಿಸಬೇಕು. ಈ ಮೂವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಅಂತಾ ಗಾಂಧಿ ಚಿಂತನೆ ವೇದಿಕೆಯ ಸಂಚಾಲಕ ನೆಂಪೆ ದೇವರಾಜ್ ಆಗ್ರಹಿಸಿದ್ದಾರೆ.
ತೀರ್ಥಹಳ್ಳಿಯ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ನೆಂಪೆ ದೇವರಾಜ್ ಮಾತನಾಡಿದರು. ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರು, ದೇಶದ ಜನರ ಮನಸಲ್ಲಿ ಅಜರಾಮರವಾಗಿದ್ದಾರೆ. ಇವರನ್ನು ನಿಂದಿಸಿ, ತಪ್ಪು ಚರಿತ್ರೆ ಸೃಷ್ಟಿ ಮಾಡುವ ಕೆಲಸವನ್ನು ಆರ್.ಎಸ್.ಎಸ್ ಮತ್ತು ಬಿಜೆಪಿಯ ಕೆಲವರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧೀಜಿಯ ಹತ್ಯೆ ಮಾಡಿದ ನಾಥೋರಾಮ್ ಗೋಡ್ಸೆಯನ್ನು ಸಮರ್ಥಿಸಿ ಮಾತನಾಡುತ್ತಿರುವ ಸಾಧ್ವಿ ಪ್ರಜ್ಞಾಸಿಂಗ್, ನಳೀನ್ ಕುಮಾರ್ ಮತ್ತು ಅನಂತ್ ಕುಮಾರ್ ಹೆಗ್ಡೆಯವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಆನಂದಪ್ಪನಾಯ್ಕ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಕಾಂಗ್ರೆಸ್ ಪಕ್ಷದ ಪ್ರಮುಖರಾದ ವಿಶ್ವನಾಥ ಶೆಟ್ಟಿ, ಬಾಳೇಹಳ್ಳಿ ಪ್ರಭಾಕರ್, ಮಂಜುನಾಥ, ಕೃಷ್ಣಪ್ಪ, ಭಾರತೀ ಪ್ರಭಾಕರ್, ನವಮಣಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]