SHIVAMOGGA LIVE NEWS | 4 FEBRUARY 2023
SHIMOGA | ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡು, ತಮ್ಮ ಇಚ್ಛೆಯ ಕಂಪನಿಗಳಿಗೆ ಸಂದರ್ಶನ ನೀಡಿದರು. ಐಟಿ ಕಂಪನಿಗಳತ್ತ (IT Company) ಆಕಾಂಕ್ಷಿಗಳು ಹೆಚ್ಚು ಆಸಕ್ತಿ ತೋರಿಸಿದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಕೋಟಿ ಕೋಟಿ ಮೊತ್ತದ ಸೈನ್ಸ್ ಮ್ಯೂಸಿಯಂ, ನವುಲೆಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್
ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಕನೆಕ್ಟಿಂಗ್ ಎಜುಕೇಷನ್ ಎಂಟರ್ ಪ್ರೈಸಸ್ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.
‘ಆಶಾಕಿರಣವಾದ ಉದ್ಯೋಗ ಮೇಳ’
ಬಳಿಕ ಮಾತನಾಡಿದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರು, ‘ದೇಶದಲ್ಲಿ ಎಲ್ಲರ ಅಭಿವೃದ್ಧಿಯಾಗಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹೇಳಿದ್ದರು. ಅದೆ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ನಿರುದ್ಯೋಗ ತೊಡೆದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಿ ಉದ್ಯೋಗ ಅರಸುತ್ತ ಹಲವು ವಿದ್ಯಾರ್ಥಿಗಳು ಸಮಯ ಹಾಳು ಮಾಡಿಕೊಂಡಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಕುವೆಂಪು ವಿವಿಯ ಉದ್ಯೋಗ ಮೇಳ ಆಶಾಕಿರಣವಾಗಿದೆ’ ಎಂದರು.
4 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು
ಸಹ್ಯಾದ್ರಿ ಕಾಲೇಜಿನ ಉದ್ಯೋಗ ಮೇಳದಲ್ಲಿ 4 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಕಲಾ ಕಾಲೇಜು ಪ್ರವೇಶ ದ್ವಾರದಲ್ಲೆ ಅಭ್ಯರ್ಥಿಗಳು ಹೆಸರು ರಿಜಿಸ್ಟರ್ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಹತೆಗೆ ತಕ್ಕಂತೆ ಎಲ್ಲೆಲ್ಲಿ ಉದ್ಯೋಗ ಲಭ್ಯ ಎಂಬ ಮಾಹಿತಿ ಒದಗಿಸಲಾಯಿತು.
30ಕ್ಕೂ ಹೆಚ್ಚು ಕಂಪನಿಗಳು
ಇನ್ಫೋಸಿಸ್, ಆಕ್ಸೆಂಚರ್ ಸೇರಿದಂತೆ ವಿವಿಧ ಐಟಿ ಕಂಪನಿಗಳು, ಬ್ಯಾಂಕುಗಳು, ಫೈನಾನ್ಸ್ ಸಂಸ್ಥೆಗಳು, ಕೃಷಿ ಉಪಕರಣ ಸಂಸ್ಥೆಗಳು ಸೇರಿದಂತೆ 30ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಪ್ರತಿ ಕಂಪನಿಗು ಒಂದೊಂದು ಕೊಠಡಿಯಲ್ಲಿ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಕಂಪನಿಗಳು ನೇರ ಸಂದರ್ಶನ ಮಾಡಿದವು. ಉಳಿದ ಸಂಸ್ಥೆಗಳು ಪರೀಕ್ಷೆ ನಡೆಸಿ, ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ ನಡೆಸಿದವು.
ಐಟಿ ಕಂಪನಿಗಳಿಗೆ ಡಿಮಾಂಡ್
ಐಟಿ ಕಂಪನಿಗಳು (IT Company) ಉದ್ಯೋಗಾಕಾಂಕ್ಷಿಗಳ ಮುಗಿಬಿದ್ದರು. ಇನ್ಫೋಸಿಸ್, ಆಕ್ಸೆಂಚರ್ ಕಂಪನಿಗಳ ಸಂದರ್ಶನ ಕೊಠಡಿ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದರು. ಇಲ್ಲಿ ಸಂದರ್ಶನದ ಬಳಿಕವೇ ಇತರೆ ಕಂಪನಿಗಳು, ಕ್ಷೇತ್ರಗಳತ್ತ ಆಕಾಂಕ್ಷಿಗಳು ಕಣ್ಣು ಹಾಯಿಸಿದರು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಬೆರಳೆಣಿಕೆಯಷ್ಟು ಆಕಾಂಕ್ಷಿಗಳು ಮಾತ್ರ ಸಂದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಕುವೆಂಪು ವಿವಿ ಪ್ಲೇಸ್ ಮೆಂಟ್ ಅಧಿಕಾರಿ ಡಾ.ಕೆ.ಆರ್.ಮಂಜುನಾಥ್, ಪ್ರಾಂಶುಪಾಲರಾದ ಪ್ರೊ.ಕೆ.ಬಿ ಧನಂಜಯ, ವಾಣಿಜ್ಯ ಹಾಗೂ ಕಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ.ಎಂ.ಕೆ.ವೀಣಾ, ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಪ್ರೋ.ಎನ್. ರಾಜೇಶ್ವರಿ, ಸಾರ್ವಜನಿಕ ಸಂಪರ್ಕಾಧಿರಿ ಡಾ. ಎಂ.ಆರ್.ಸತ್ಯಪ್ರಕಾಶ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ‘ಸಿಟಿ ಸೆಂಟರ್’ ಮಾದರಿ ರೆಡಿಯಾಗಲಿದೆ ಶಿವಮೊಗ್ಗ ಜಿಲ್ಲೆಯ 3 ರೈಲ್ವೆ ನಿಲ್ದಾಣಗಳು