ಶಿವಮೊಗ್ಗ ಲೈವ್.ಕಾಂ | 23 ಮಾರ್ಚ್ 2019
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಹೆಸರಿನ ಜೊತೆಗೆ, ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಕಾಂಗ್ರೆಸ್’ನ ಪ್ರಬಾವಿ ನಾಯಕರೊಬ್ಬರ ಹೆಸರು ಚಾಲ್ತಿಯಲ್ಲಿದೆ. ಪ್ರಚಾರ ಕಣಕ್ಕೆ ಅವರ ಎಂಟ್ರಿಯಾದರೆ, ಬಿಜೆಪಿ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಲಿದೆ ಅನ್ನುವ ವಿಶ್ವಾಸ, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಅಂದಹಾಗೆ, ಆ ನಾಯಕ ಯಾರು ಗೊತ್ತಾ? ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್.
ಯಾವಾಗ ಬರ್ತಾರೆ ಡಿಕೆಶಿ?
ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ, ಡಿ.ಕೆ.ಶಿವಕುಮಾರ್ ಅವರಿಗೆ ಪ್ರಚಾರದ ಉಸ್ತುವಾರಿ ವಹಿಸಲಾಗಿತ್ತು. ಗಣಿನಾಡಿನಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಧ್ವಜ ಹಾರಿತ್ತು. ಈಗ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪ್ರಚಾರದ ಉಸ್ತುವಾರಿಯನ್ನೂ ಡಿಕೆಶಿ ವಹಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಡಿ.ಕೆ.ಶಿವಕುಮಾರ್ ಅವರು ಪ್ರಚಾರವನ್ನು ಯಾವಾಗ ಶುರು ಮಾಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಡಿಕೆಶಿ ಎಂಟ್ರಿ ಕುರಿತು ಯಾರೆಲ್ಲ ಏನಂದಿದ್ದಾರೆ? ವಿಡಿಯೋ ನೋಡಿ..
ಕಾಂಗ್ರೆಸ್, ಜೆಡಿಎಸ್ ಯುವ ಮುಖಂಡರೇನಂತಾರೆ?
ಸಚಿವ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗದಲ್ಲಿ ಪ್ರಚಾರಕ್ಕೆ ಬಂದರೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡುತ್ತೆ, ನಾಯಕರಲ್ಲಿ ಒಗ್ಗಟ್ಟು ಬೆಳೆಸುತ್ತಾರೆ. ಯುವ ಮತದಾರರನ್ನು ಸೆಳೆಯಲು ಅನುಕೂವಾಗಲಿದೆ ಅಂತಾರೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರವೀಣ್.
ಜೆಡಿಎಸ್ ಪಕ್ಷದ ಯುವ ಕಾರ್ಯಕರ್ತರಲ್ಲೂ ಡಿಕೆಶಿ ಹವಾ ಕ್ರಿಯೇಟ್ ಮಾಡಿದ್ದಾರೆ. ‘ಡಿ.ಕೆ.ಶಿವಕುಮಾರ್ ಅವರು ಮಾಸ್ ಲೀಡರ್. ಸಣ್ಣಪುಟ್ಟ ವ್ಯತ್ಯಾಸಗಳೇನಿದ್ದರೂ ಅದನ್ನು ದೂರ ಮಾಡಿ, ಒಟ್ಟಿಗೆ ಕರೆದೊಯ್ಯುವ ಶಕ್ತಿ ಅವರಿಗಿದೆ. ಹಾಗಾಗಿ ಆನೆಬಲ ಬರಲಿದೆ. ಬಳ್ಳಾರಿಯಲ್ಲಾದಂತೆ ಇಲ್ಲಿಯೂ ಅನುಕೂಲವಾಗಲಿದೆ ಅಂತಾರೆ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್.
ಇನ್ನು, ಲೋಕಸಭೆ ಉಪ ಚುನಾವಣೆ ಸಂದರ್ಭ, ಶಿವಮೊಗ್ಗದ ಕಾಂಗ್ರೆಸ್ ಮುಖಂಡ ದೇವೇಂದ್ರಪ್ಪ, ಬಳ್ಳಾರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಪಕ್ಷ ಸಂಘಟನೆ ಮಾಡಿದ್ದರು. ‘ಡಿ.ಕೆ.ಶಿವಕುಮಾರ್ ಅವರು ಪ್ರಚಾರಕ್ಕೆ ಬರುತ್ತಿದ್ದಂತೆ, ಯುವಕರ ಪಡೆಯನ್ನು ಸಿದ್ಧಪಡಿಸುತ್ತಾರೆ. ಪ್ರತೀ ದಿನ ಕೆಲಸ ವಹಿಸಿ, ಅದರ ಮಾಹಿತಿ ಪಡೆಯುತ್ತಾರೆ. ಸಂಘಟನೆಯನ್ನು ಚುರುಕುಗೊಳಿಸುತ್ತಾರೆ. ಅವರು ಹೋದಲ್ಲೆಲ್ಲ ಜನ ಸೇರುತ್ತಾರೆ. ಮತ ಸೆಳೆಯುತ್ತಾರೆ’ ಅಂತಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]