SHIVAMOGGA LIVE NEWS |7 JANUARY 2023
THIRTHAHALLI : ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕರಿಗಾಗಿ ನಾಯಿಯೊಂದು (dog) ಅದೆ ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತ ಫೋಟೊ ವೈರಲ್ ಆಗಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ‘ಚಾರ್ಲಿ 777’ ಸಿನಿಮಾದ ದೃಶ್ಯವನ್ನು ನನೆಪಿಸುತ್ತಿದೆ. ಅಷ್ಟೆ ಅಲ್ಲ, ಈಗ ಇಡೀ ಪಟ್ಟಣದ ಜನ ಈ ಶ್ವಾನಕ್ಕೆ (dog) ಚಾರ್ಲಿ ಎಂದು ಕರೆಯುತ್ತಿದ್ದಾರೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪಟ್ಟಣದ ಕಿರಣ್ ಆಸ್ಪತ್ರೆಯಲ್ಲಿ ನಾಗರತ್ನ ಶಾಸ್ತ್ರಿಯವರಿಗೆ ಚಿಕಿತ್ಸೆ ನಡೆಯುತ್ತಿತ್ತು.
ಬಾಗಿಲಲ್ಲಿ ಕಾದು ಕುಳಿತ ಶ್ವಾನ
ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್ ಅವರು ಮನೆಯಲ್ಲಿ ನಾಯಿ (dog) ಸಾಕಿದ್ದಾರೆ. 8 ತಿಂಗಳ ನಾಯಿಗೆ ಪುಪ್ಪಿ ಎಂದು ಕರಿಯುತ್ತಿದ್ದಾರೆ. ನಾಗರತ್ನ ಶಾಸ್ತ್ರಿಯವರು ಆಸ್ಪತ್ರೆಗೆ ದಾಖಲಾದಾಗಿನಿಂದ ಪುಪ್ಪಿ, ಕಿರಣ್ ಆಸ್ಪತ್ರೆ ಬಾಗಿಲಲ್ಲಿ ಮೊಕ್ಕಾಂ ಹೂಡಿತ್ತು. ಆಸ್ಪತ್ರೆ ಸಿಬ್ಬಂದಿ ಮತ್ತು ಬಂದು ಹೋಗುವ ಸಾರ್ವಜನಿಕರಿಗೆ ಪುಪ್ಪಿ ತೊಂದರೆ ಕೊಟ್ಟಿಲ್ಲ. ಆದರೆ ಹೆಚ್ಚು ಹೊತ್ತು ಆಸ್ಪತ್ರೆ ಬಾಗಿಲಲ್ಲೆ ಕಾದು ಕುಳಿತಿರುತ್ತಿತ್ತು.
ವಾರ್ಡ್ ಕಡೆಗೆ ಕಣ್ಣು ನೆಟ್ಟಿರುತ್ತಿತ್ತು
ಇನ್ನು, ಆಸ್ಪತ್ರೆ ಬಾಗಿಲಲ್ಲಿ ನಿಲ್ಲುತ್ತಿದ್ದ ಪುಪ್ಪಿ, ನಾಗರತ್ನ ಶಾಸ್ತ್ರಿಯವರನ್ನು ಕರೆದೊಯ್ದು ದಾಖಲು ಮಾಡಿದ್ದ ವಾರ್ಡ್ ಕಡೆಗೆ ದೃಷ್ಟಿ ನೆಟ್ಟಿರುತ್ತಿತ್ತು. ಬೇರೆ ಯಾರೆ ಬಂದು ಮಾತನಾಡಿಸಿದರು, ಸೌಮ್ಯವಾಗಿಯೇ ಪ್ರತಿಕ್ರಿಯಿಸಿತ್ತಿತ್ತು. ಆ ಬಳಿಕ ಪುನಃ ವಾರ್ಡ್ ಕಡೆಗೆ ಕಣ್ಣು ನೆಟ್ಟು ಕಾದು ನಿಲ್ಲುತ್ತಿತ್ತು. ನಾಗರತ್ನ ಶಾಸ್ತ್ರಿಯವರು ಆಸ್ಪ್ರೆಯಿಂದ ಡಿಸ್ಚಾರ್ಜ್ ಆದಾಗ, ಆಂಬುಲೆನ್ಸ್ ಬಳಿ ಕುಣಿದಾಡಿತ್ತು ಅನ್ನುತ್ತಾರೆ ಸಿಬ್ಬಂದಿ.
‘ಒಂದೂವರೆ ತಿಂಗಳಿದ್ದಾಗ ಅದನ್ನು ಮನೆಗೆ ತಂದಿದ್ದು. ಪುಪ್ಪಿ ಎಂದು ಕರೆಯುತ್ತೇವೆ. ಈಗ ಅದಕ್ಕೆ 8 ತಿಂಗಳು. ನಮ್ಮ ತಾಯಿಗೆ ವಯಸ್ಸಾಗಿದೆ. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಕಿರಣ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ನಮ್ಮ ಜೊತೆಗೆ ಬಂದು ಆಸ್ಪತ್ರೆ ಮುಂದೆ ನಿಲ್ಲುತ್ತಿತ್ತು. ಅಲ್ಲಿಗೆ ಬರುವ ಎಲ್ಲರಿಗು ಅದು ನಮ್ಮ ಮನೆ ನಾಯಿ ಅನ್ನುವುದು ಗೊತ್ತಾಗಿ ಹೋಗಿದೆ’ ಅನ್ನುತ್ತಾರೆ ನಾಗರತ್ನ ಶಾಸ್ತ್ರಿ ಅವರ ಮಗಳು ಸುಧಾ ಜೋಯಿಸ್.
ಏನೇನೂ ತಿನ್ನದೆ ಹಾಗೆ ಕುಳಿತಿದೆ
ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗರತ್ನ ಶಾಸ್ತ್ರಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಕೊನೆಯುಸಿರೆಳೆದಿದ್ದಾರೆ. ಆಗಿನಿಂದಲು ಪುಪ್ಪಿ ಆಹಾರ ಸೇವಿಸದೆ ಸುಮ್ಮನೆ ಕುಳಿತಿದೆಯಂತೆ. ‘ಅಮ್ಮ ತೀರಿಕೊಂಡರು. ಪುಪ್ಪಿ ಆಗಿನಿಂದ ಏನೇನೂ ತಿಂದಿಲ್ಲ. ನಮ್ಮ ಮನೆಯಲ್ಲಿ ಯಾರಿಗಾದರು ಆರೋಗ್ಯ ಸಮಸ್ಯೆಯಾದರು ಅದಕ್ಕೆ ಗೊತ್ತಾಗುತ್ತದೆ. ಆಗ ಅದು ಕೂಡ ಡಲ್ ಆಗಿ ಕೂರುತ್ತದೆ’ ಅನ್ನುತ್ತಾರೆ ಸುಧಾ ಜೋಯಿಸ್.
ಎಲ್ಲರು ಈಗ ಚಾರ್ಲಿ ಅನ್ನುತ್ತಿದ್ದಾರೆ
ಸುಧಾ ಜೋಯಿಸ್ ಅವರ ಮನೆಯ ಪುಪ್ಪಿಗೆ ಈಗ ತೀರ್ಥಹಳ್ಳಿ ಪಟ್ಟಣದ ಜನರು ಚಾರ್ಲಿ ಅಂತಾ ಕರೆಯಲು ಆರಂಭಿಸಿದ್ದಾರೆ. ಚಾರ್ಲಿ ಸಿನಿಮಾದ ನಾಯಿಯಂತೆಯೆ ಬಣ್ಣ, ಅದರಂತೆಯೇ ಹೊಂದಾಣಿಕೆ, ಹೇಳಿದ್ದು ಕೇಳುವ ಸ್ವಭಾವ ಕಂಡು ಜನರು ಚಾರ್ಲಿ ಎಂದು ಕರೆಯುತ್ತಿದ್ದಾರಂತೆ.
ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ
ಆರೋಗ್ಯ ಕೈಕೊಟ್ಟಾಗ ನಂಟರು, ಇಷ್ಟರು ಬರುವುದೆ ಕಷ್ಟದ ಕಾಲ. ಇಂತಹ ಸಂದರ್ಭ ತನ್ನನ್ನು ಸಾಕಿದವರು ಹಾಸಿಗೆ ಹಿಡಿದಾಗ ಆಸ್ಪತ್ರೆಗೆಯ ಬಾಗಿಲಲ್ಲಿ ನಿಂತು ಅವರಿಗಾಗಿ ಕಾದ ಕುಳಿತ ಪುಪ್ಪಿ ಮಾದರಿ ಅನಿಸುತ್ತದೆ. ನಾಯಿಯ ನಿಷ್ಠೆಯನ್ನು ಪುನಃ ಸಾಬೀತುಪಡಿಸಿದೆ.