SHIVAMOGGA LIVE NEWS | 16 ಮಾರ್ಚ್ 2022
ಚಾರ್ಜ್’ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ಹಲವು ವಸ್ತುಗಳು ಬೆಂಕಿಗೆ ಆಹುತಿ ಆಗಿವೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.
ಹೊಳೆಹೊನ್ನೂರು ಸಮೀಪದ ನಿಂಬೆಗುಂದಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರಾತ್ರಿ ಚಾರ್ಜ್’ಗೆ ಹಾಕಿದ್ದಾಗ ವಾಹನ ಸ್ಪೋಟಗೊಂಡು ಅವಘಡ ಸಂಭವಿಸಿದೆ.
ಹೇಗಾಯ್ತು ಘಟನೆ?
ನಿಂಬೆಗುಂದಿ ಗ್ರಾಮದ ಕಾಡಪ್ಪರ ಮಲ್ಲಿಕಾರ್ಜುನ ಎಂಬುವವರಿಗೆ ಸೇರಿದ ಬೈಕ್ ಸ್ಪೋಟಗೊಂಡಿದೆ. ಮಲ್ಲಿಕಾರ್ಜುನ ಅವರ ಮಗ ಕಿರಣ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಕಾಡಪ್ಪರ ಮಲ್ಲಿಕಾರ್ಜುನ ಅವರ ಮಗ ಪ್ರಶಾಂತ್, ‘ಎರಡೂವರೆ ಗಂಟೆ ಚಾರ್ಜ್ ಮಾಡಬೇಕು. ಆದರೆ ಒಂದು ಗಂಟೆ ಚಾರ್ಜ್ ಆಗುವ ಹೊತ್ತಿಗೆ ಬೈಕ್ ಸ್ಪೋಟಗೊಂಡಿದೆ. ಅಲ್ಲೇ ಪಕ್ಕದಲ್ಲಿ ಮಲಗಿದ್ದ ನಮ್ಮ ಅಣ್ಣ ಮಂಚದಿಂದ ಹಾರಿದ್ದಾನೆ. ಇಲ್ಲದಿದ್ದರೆ ಕಷ್ಟವಿತ್ತು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಎಲ್ಲವು ಬೆಂಕಿಗೆ ಆಹುತಿ
ಮಲ್ಲಿಕಾರ್ಜುನ ಅವರ ಮಗ ಕಿರಣ್ ಬೈಕ್ ಚಾರ್ಜ್’ಗೆ ಹಾಕಿದ್ದರು. ಅಡಕೆ ಮನೆ ಬಳಿ ಚಾರ್ಜ್’ಗೆ ಹಾಕಿ ಪಕ್ಕದಲ್ಲೆ ಇದ್ದ ಮಂಚದ ಮೇಲೆ ಮಲಗಿದ್ದರು. ಒಂದು ಗಂಟೆ ಚಾರ್ಜ್ ಆದ ಬಳಿಕ ಬೈಕ್ ಸ್ಪೋಟಗೊಂಡಿದೆ ಎಂದು ಆರೋಪಿಸಲಾಗಿದೆ.
ಬೈಕ್ ಸ್ಪೋಟಗೊಳ್ಳುತ್ತಿದ್ದಂತೆ ಕಿರಣ್ ಅವರು ಮಂಚದಿಂದ ಹಾರಿ ತಪ್ಪಿಸಿಕೊಂಡಿದ್ದಾರೆ. ಅವರು ಮಲಗಿದ್ದ ಜಾಗಕ್ಕೂ ಬೆಂಕಿ ವ್ಯಾಪಿಸಿದೆ. ಬೈಕ್ ಸ್ಪೋಟಗೊಂಡು ಅಡಕೆ ಮನೆಯಲ್ಲಿದ್ದ ವೆಲ್ಡಿಂಗ್ ಮೆಷಿನ್, ಗ್ಯಾಸ್ ಮೆಷಿನ್, ಚೀಲಗಳು ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
‘ಬೈಕ್ ಈಗ ಸೈಕಲ್ ಆಗಿದೆ’
ಸ್ಪೋಟಗೊಂಡ ಕೆಲವೆ ಹೊತ್ತಿಗೆ ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ‘ಸ್ಪೋಟವಾಗುತ್ತಿದ್ದ ಹಾಗೆ ಮೇನ್ ಸ್ವಿಚ್ ಆಫ್ ಮಾಡಿದೆವು. ಅಕ್ಕಪಕ್ಕದಲ್ಲೆಲ್ಲ ಬೆಂಕಿ ಹೊತ್ತಿಕೊಂಡಿತ್ತು. ಪೈಪ್ ಮೂಲಕ ನೀರು ಬಿಟ್ಟು ಬೆಂಕಿ ಆರಿಸಿದೆವು. ಅಷ್ಟು ಹೊತ್ತಿಗಾಗಲೆ ನಮ್ಮ ಬೈಕು ಸೈಕಲ್ ರೀತಿ ಆಗಿತ್ತು’ ಅನ್ನುತ್ತಾರೆ ಪ್ರಶಾಂತ್.
ಕಂಪನಿ ಸಿಬ್ಬಂದಿ ದೌಡು
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಎಲೆಕ್ಟ್ರಿಕ್ ಬೈಕ್ ಕಂಪನಿಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಪರಿಹಾರದ ಭರವಸೆಯನ್ನು ನೀಡಿದ್ದಾರೆ ಎಂದು ಪ್ರಶಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200