SHIVAMOGGA LIVE NEWS | 12 ಮಾರ್ಚ್ 2022
ಮಂಡಗದ್ದೆ ಸಮೀಪದ ಕೀಗಡಿ ಅರಣ್ಯ ಪ್ರದೇಶದಲ್ಲಿ ಕೆಲವು ದಿನದಿಂದ ಪುಂಡಾಟ ಮೆರೆಯುತ್ತಿದ್ದ ಕಾಡಾನೆಯನ್ನು ಹಿಮ್ಮೆಟ್ಟಿಸಲು ಸಕ್ರೆಬೈಲು ಬಿಡಾರದ ಸಾಕಾನೆಗಳು ಎಲಿಫೆಂಟ್ ಡ್ರೈವ್ ಆರಂಭಿಸಿವೆ. ಮೂರು ಆನೆಗಳನ್ನು ಈ ಅರಣ್ಯ ಪ್ರದೇಶಕ್ಕೆ ಕರೆತರಲಾಗಿದೆ.
ಕೀಗಡಿ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಂಡು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಯ ಹುಟ್ಟಿಸಿರುವ ಕಾಡಾನೆ
ಕೀಗಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಪುಂಡಾಟ ಮೆರೆಯುತ್ತಿದೆ. ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿದೆ. ಅಡಕೆ, ಬಾಳೆ, ಭತ್ತದ ಬೆಳೆಯನ್ನು ನಾಶ ಮಾಡಿದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ. ರಾತ್ರಿ ವೇಳೆ ಮನೆಯಿಂದ ಹೊರ ಬರಲು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಗೃಹ ಸಚಿವರಿಗೆ ದೂರು
ಪುಂಡಾಟ ಮಾಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದರು. ಆನೆಯನ್ನು ಹಿಮ್ಮಿಟ್ಟಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಲಿಫೆಂಟ್ ಡ್ರೈವ್ ಆರಂಭಿಸಲಾಗಿದೆ.
ಸಕ್ರೆಬೈಲಿನ ಮೂರು ಆನೆಗಳು
ಕಾಡಾನೆ ಹಿಮ್ಮೆಟ್ಟಿಸುವ ಎಲಿಫೆಂಟ್ ಡ್ರೈವ್’ಗೆ ಸಕ್ರೆಬೈಲಿನ ಮೂರು ಆನೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸಾಗರ್, ಬಾಲಣ್ಣ, ಬಹದ್ದೂರ್ ಆನೆಗಳು ಕೀಗಡಿ ಅರಣ್ಯ ಪ್ರದೇಶಕ್ಕೆ ಬಂದು ಬೀಡು ಬಿಟ್ಟಿವೆ. ಎಂಟು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಡಿನೊಳಗೆ ಆನೆಯನ್ನು ಹುಡುಕಿ, ಅದನ್ನು ಹಿಮ್ಮೆಟ್ಟಿಸುವ ಕೆಲಸ ಆಗಬೇಕಿದೆ. ದಟ್ಟ ಅಡವಿ ಮಧ್ಯೆ ಕಾರ್ಯಾಚರಣೆ ನಡೆಸುವುದು ಸವಾಲಿನ ಕೆಲಸವಾಗಿದೆ.
ಇದನ್ನೂ ಓದಿ | ರಾತ್ರೋರಾತ್ರಿ ಅಡಕೆ, ಬಾಳೆ ತೋಟದ ಮೇಲೆ ಆನೆಗಳ ದಾಳಿ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200