ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ನವೆಂಬರ್ 2021
ಬ್ಯಾಂಕ್ ಸಿಬ್ಬಂದಿಯನ್ನು ಕರೆಯಿಸಿ ಮಾತನಾಡಿ ಅನುಕೂಲ ಮಾಡಿಕೊಡಿ. ಇಲ್ಲವಾದಲ್ಲಿ ನಾವು ಜೀವಂತವಾಗಿ ಉಳಿಯುದಿಲ್ಲ. ಹೀಗೆಂದು ಕುಟುಂಬವೊಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದೆ.
ಕಳೆನಾಶಕ ಬಾಟಲಿಗಳನ್ನು ಇಟ್ಟುಕೊಂಡ ಕುಟುಂಬವೊಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಬ್ಯಾಂಕ್ ಸಿಬ್ಬಂದಿಗಳಿಗೆ ತಿಳಿ ಹೇಳಿ ತಮ್ಮನ್ನು ಸಾಲದಿಂದ ಮುಕ್ತಗೊಳಿಸಬೇಕು ಎಂದು ಕುಟುಂಬದವರು ಮನವಿ ಮಾಡಿದರು.
ಏನಿದು ಪ್ರಕರಣ? ಯಾಕಿಂಗೆ ಪ್ರತಿಭಟನೆ?
ಸುಧಾಬಾಯಿ ಎಂಬುವವರು ಕಾಂಡಿಮೆಂಟ್ಸ್ ಆರಂಭಿಸಲು ಶಿವಮೊಗ್ಗದ ಖಾಸಗಿ ಬ್ಯಾಂಕ್ ಒಂದರಲ್ಲಿ ಸಾಲ ಪಡೆದಿದ್ದರು. ತಮ್ಮ ಸ್ವಂತ ಮನೆಯನ್ನು ಅಡವಾಗಿಟ್ಟು 12 ಲಕ್ಷ ರೂ. ಸಾಲ ಪಡೆದಿದ್ದರು. ಈಗಾಗಲೇ ಅಸಲು 13 ಲಕ್ಷ ರೂ. ಪಾವತಿಸಲಾಗಿದೆ. ಆದರೂ ಇನ್ನಷ್ಟು ಹಣ ಪಾವತಿಸಬೇಕಿದೆ. ಇಲ್ಲವಾದಲ್ಲಿ ಮನೆ ಹರಾಜಿಗಿಡಲಾಗುತ್ತದೆ ಎಂದು ಬ್ಯಾಂಕಿನವರು ಬೆದರಿಸುತ್ತಿದ್ದಾರೆ ಎಂದು ಸುಧಾಬಾಯಿ ಆರೋಪಿಸಿದರು.
ಲಾಕ್ ಡೌನ್ ಹಿನ್ನೆಲೆ ಕಾಂಡಿಮೆಂಟ್ಸ್ ವ್ಯಾಪಾರ ಕುಂಟಿತವಾಗಿತ್ತು. ಅಲ್ಲದೆ ತೀವ್ರ ನಷ್ಟವಾದ ಹಿನ್ನೆಲೆ ಕಾಂಡಿಮೆಂಟ್ಸನ್ನು ಬಂದ್ ಮಾಡಲಾಗಿದೆ. ಈಗ ಜೀವನ ನಡೆಸುವುದೆ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಮನೆ ಹರಾಜು ಹಾಕುವುದಾಗಿ ಬ್ಯಾಂಕಿನವರು ಭಯ ಹುಟ್ಟಿಸುತ್ತಿದ್ದಾರೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳನ್ನು ಕರೆಯಿಸಿ ಚರ್ಚೆ ಮಾಡಿ, ತಮ್ಮನ್ನು ಸಾಲದಿಂದ ಮುಕ್ತರನ್ನಾಗಿ ಮಾಡಬೇಕು ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಇದೆ ಕಾರಣಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳೆನಾಶಕ ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಕುಟುಂಬದವರು, ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಸುಧಾಬಾಯಿ, ಅವರ ಪತಿ ರಘುನಾಥ ಸಿಂಗ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.