ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ನವೆಂಬರ್ 20210
ಮನೆಗಳಲ್ಲಿ ಕಸ ಸಂಗ್ರಹಕ್ಕೆ ಹೋಗಿದ್ದ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಸುಮಾರು ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪೌರ ಕಾರ್ಮಿಕರಾದ ದೇವರಾಜ್ ಮತ್ತು ಮಂಜುನಾಥ ನಾಯ್ಕ್ ಅವರ ಮೇಲೆ ಹಲ್ಲೆಯಾಗಿತ್ತು. ಅಲ್ಲದೆ ಮಹಾನಗರ ಪಾಲಿಕೆ ಕಸ ಸಂಗ್ರಹಣೆ ವಾಹನದ ಗಾಜಿಗೆ ಹಾನಿ ಮಾಡಲಾಗಿತ್ತು. ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ. ಕಸ ಸಂಗ್ರಹಕ್ಕೆ ಹೋದಾಗ ಪಾಲಿಕೆ ಪೌರ ಕಾರ್ಮಿಕರ ಮೇಲೆ ಹಲ್ಲೆ, ವಾಹನದ ಮೇಲೆ ದಾಳಿ
ಘಟನೆ ಸಂಬಂಧ ಪೌರ ಕಾರ್ಮಿಕರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಟಿಪ್ಪುನಗರದ ಗೌಸಿಯಾ ಸರ್ಕಲ್ ಸಮೀಪದ ಯುಸುಫ್, ಶಾರುಖ್ ಮತ್ತು ಇತರೆ ಎಂಟರಿಂದ ಹತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ನ.15ರಂದ ಬೆಳಗ್ಗೆ ಕಸ ಸಂಗ್ರಹ ಮಾಡಲು ಟಿಪ್ಪು ನಗರದ ಜೆಪಿ ನಗರಕ್ಕೆ ಪೌರ ಕಾರ್ಮಿಕರು ತೆರಳಿದ್ದರು. ಮಹಿಳೆಯೊಬ್ಬರು ಚೀಲದಲ್ಲಿ ಕಸ ತಂದು ಕೊಟ್ಟಿದ್ದಾರೆ. ಹಸಿ ಮತ್ತು ಒಣ ಕಸ ವಿಂಗಡಿಸಿ ಕೊಡಲು ಪ್ಲಾಸ್ಟಿಕ್ ಬುಟ್ಟಿ ನೀಡಲಾಗಿದೆ. ವಿಂಗಡಣೆ ಮಾಡಿ ಕೊಡುವಂತೆ ಪೌರ ಕಾರ್ಮಿಕ ದೇವರಾಜ್ ಮಹಿಳೆಗೆ ತಿಳಿಸಿದ್ದಾರೆ. ಆಗ ಅಲ್ಲಿಯೇ ಇದ್ದ ಯುವಕನೊಬ್ಬ ದೇವರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ.
ಆತನ ಜೊತೆಗೆ ಎಂಟರಿಂದ ಹತ್ತು ಮಂದಿ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಯುವಕನೊಬ್ಬ ದೊಣ್ಣೆಯಿಂದ ದೇವರಾಜ್ ತಲೆಗೆ ಹೊಡೆದಿದ್ದಾನೆ. ಬಿಡಿಸಲು ಹೋದ ಪಾಲಿಕೆ ವಾಹನ ಚಾಲಕ ಮಂಜುನಾಥ ನಾಯ್ಕ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ.
ಕೂಡಲೆ ಸ್ಥಳೀಯರು ಮತ್ತು ಇತರೆ ಪೌರ ಕಾರ್ಮಿಕರು ಬಂದು ಜಗಳ ಬಿಡಿಸಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.