ಶಿವಮೊಗ್ಗ ಲೈವ್.ಕಾಂ | SHIMOGA | 22 ಮಾರ್ಚ್ 2020
ಸಾಮಾನ್ಯ ಸಂದರ್ಭದಲ್ಲೇ ಊರು ಉಸಾಬರಿ ನಮಗ್ಯಾಕೆ ಅಂತಾ ಓಡಾಡೋರು ಹೆಚ್ಚು. ಅದರಲ್ಲೂ ಕರೋನ ಆತಂಕ, ‘ಜನತಾ ಕರ್ಫ್ಯೂ’ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಿನ ಹಸ್ತ ಚಾಚುವವರು ಸಿಗುವುದೇ ಕಷ್ಟ.
‘ಜನತಾ ಕರ್ಫ್ಯೂ’ ಹಿನ್ನೆಲೆ ಶಿವಮೊಗ್ಗದಲ್ಲಿ ಇವತ್ತು ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬೆಳಗ್ಗೆ ಕೆಎಸ್ಆರ್’ಟಿಸ್ ಬಸ್’ಗಳಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ಪ್ರಯಾಣಿಕರು ತಮ್ಮೂರಿಗೆ ತೆರಳಲು ಪರದಾಡಬೇಕಾಯಿತು. ಈ ವೇಳೆ ಹೂವಾಡಗಿತ್ತಿಯೊಬ್ಬರು, ತಮ್ಮ ವ್ಯಾಪಾರ ಬಿಟ್ಟು, ಜನರಿಗೆ ನೆರವಾದರು.
ವಿಡಿಯೋ ನೋಡಲು ಕ್ಲಿಕ್ ಮಾಡಿ
https://www.facebook.com/liveshivamogga/videos/2418400708260668/?t=0
ಹೂವಾಡಗಿತ್ತಿ ನೆರವಾಗಿದ್ದು ಹೇಗೆ?
ಖಾಸಗಿ ಬಸ್ ನಿಲ್ದಾಣದ ಮುಂದೆ ಹೂವು ಮಾರುತ್ತಿದ್ದ ಗಂಗಮ್ಮ, ಪ್ರಯಾಣಿಕರ ಸಂಕಷ್ಟ ಕಂಡು ಮರುಗಿದರು. ವ್ಯಾಪಾರವನ್ನು ನಿಲ್ಲಿಸಿ, ಪ್ರಯಾಣಿಕರ ಸಂಕಷ್ಟ ಪರಿಹಾರಕ್ಕೆ ನಿಂತರು. ಬಸ್ಸುಗಳಿಲ್ಲದೆ ತಮ್ಮೂರು ತಲುಪುವುದು ಹೇಗೆ ಎಂಬ ದುಗುಡದಲ್ಲಿದ್ದ ಪ್ರಯಾಣಿಕರ ಬಳಿ ಯಾವ ಊರಿಗೆ ಹೋಗಬೇಕು ಎಂದು ವಿಚಾರಿಸುತ್ತಿದ್ದರು. ಬಳಿಕ ಯಾವುದಾದೂ ಬಸ್ಸು, ಗೂಡ್ಸ್ ಆಟೋ, ಟೆಂಪೋಗಳು ಆ ಮಾರ್ಗವಾಗಿ ತೆರಳುವುದಿದ್ದರೆ, ಆ ವಾಹನಗಳಿಗೆ ಪ್ರಯಾಣಿಕರನ್ನು ಹತ್ತಿಸುತ್ತಿದ್ದರು.
ಮಕ್ಕಳು, ಬ್ಯಾಗುಗಳು ಜೊತೆಗೆ ಬಂದು ಇಳಿದಿದ್ದ ಮಹಿಳೆಯರಿಗೆ ಮೊದಲ ಆದ್ಯತೆ ಕೊಡುತ್ತಿದ್ದರು ಗಂಗಮ್ಮ. ತಾವೇ ಮಕ್ಕಳು, ಲಗೇಜುಗಳನ್ನು ಹಿಡಿದು ತಂದು ವಾಹನ ಹತ್ತಿಸಿ, ಮಹಿಳೆಯರಿಗೆ ಜಾಗ ಬಿಡಿ ಅನ್ನುತ್ತಿದ್ದರು. ವಾಹನಗಳಲ್ಲಿ ಇನ್ನೂ ಜಾಗವಿದೆ ಅನ್ನುವುದು ಗೊತ್ತಾದರೆ ತಾವೇ ಜೋರಾಗಿ ಕೂಗಿ, ಪ್ರಯಾಣಿಕರನ್ನು ಎಚ್ಚರಿಸುತ್ತಿದ್ದರು. ಗಂಗಮ್ಮ ಅವರ ನೆರವಿನಿಂದಾಗಿ ಹಲವರು ಇವತ್ತು ತಮ್ಮೂರು, ಮನೆ ತಲುಪುವಂತಾಗಿದೆ.
ಗಂಗಮ್ಮ ಅವರು ಸವರ್’ಲೈನ್ ರಸ್ತೆ ನಿವಾಸಿ. ಬಹು ವರ್ಷದಿಂದ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. ಸದ್ಯ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಮುಂದೆ ಹೂವು ಮಾರಾಟ ಮಾಡುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]