SHIVAMOGGA LIVE NEWS | RAPE | 12 ಮೇ 2022
ಪತಿ ಎದುರಲ್ಲೆ ಪತ್ನಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲಿ ಘಟನೆ ಸಂಭವಿಸಿದೆ.
ರಾತ್ರಿ ಬಸ್ ಇಳಿದು ನಡೆದು ಹೋಗುತ್ತಿದ್ದ ದಲಿತ ದಂಪತಿ ಮೇಲೆ ನಾಲ್ವರ ಗುಂಪೊಂದು ದಾಳಿ ಮಾಡಿದೆ. ಪತಿ ಮೇಲೆ ಹಲ್ಲೆ ನಡೆಸಿ, ಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ವಾಸಿ 26 ವರ್ಷದ ಮಹಿಳೆಯ ಮಾನಭಂಗಕ್ಕೆ ಯತ್ನಿಸಲಾಗಿದೆ.
ತೀರ್ಥಹಳ್ಳಿಯಿಂದ ಮನೆಗೆ ಬರುತ್ತಿದ್ದರು
26 ವರ್ಷದ ಮಹಿಳೆ ಅನಾರೋಗ್ಯದ ಹಿನ್ನೆಲೆ ತನ್ನ ಪತಿಯೊಂದಿಗೆ ತೀರ್ಥಹಳ್ಳಿಯ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ಸಿಗದ ಹಿನ್ನಲೆ ಮೆಡಿಕಲ್ ಶಾಪ್ ಒಂದರಿಂದ ಔಷಧಿ ಖರೀದಿಸಿ ಊರಿಗೆ ಮರಳುತ್ತಿದ್ದರು. ತೀರ್ಥಹಳ್ಳಿಯಿಂದ ಬಸ್ ಮೂಲಕ ದಂಪತಿ ಊರಿಗೆ ಹಿಂತಿರುಗಿದ್ದರು. ಬಸ್ ಇಳಿದು ಸಮೀಪದಲ್ಲಿರುವ ತಮ್ಮ ಮನೆಗೆ ನಡೆದು ಹೋಗುತ್ತಿದ್ದರು.
ದಾಳಿ ಮಾಡಿದ ನಾಲ್ವರು ಯುವಕರು
ರಾತ್ರಿ 9 ಗಂಟೆಗೆ ಬಸ್ ಇಳಿದು ನಡೆದು ಹೋಗುತ್ತಿದ್ದಾಗ ನಾಲ್ವರು ಯುವಕರು ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವ ಉಂಟಾಗಿ ಪತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಈ ವೇಳೆ ಯುವಕರು ಮಹಿಳೆಯನ್ನು ಪಕ್ಕದ ರಬ್ಬರ್ ಪ್ಲಾಂಟೇಷನ್’ಗೆ ಎಳೆದೊಯ್ದಿದ್ದಾರೆ. ಆಕೆಯನ್ನು ವಿವಸ್ತ್ರಗೊಳಿಸಿ ಮಾನಭಂಗಕ್ಕೆ ಯತ್ನಿಸಿದ್ದಾರೆ.
ಕೂಗಾಟ, ಎಚ್ಚರಗೊಂಡ ಪತಿ
ಮಾನಭಂಗಕ್ಕೆ ಯತ್ನಿಸಿದಾಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾಳೆ. ಇದನ್ನು ಕೇಳಿ ಪತಿ ಎಚ್ಚರಗೊಂಡಿದ್ದು, ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾನೆ. ಹಾಗಾಗಿ ನಾಲ್ವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ನಿನ್ನನ್ನು ಅತ್ಯಾಚಾರ ಮಾಡದೆ ಬಿಡುವುದಿಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ ದೂರಿನಲ್ಲಿ ತಿಳಿಸಲಾಗಿದೆ.
ಇಬ್ಬರು ಆರೋಪಿಗಳ ಗುರುತು ಪತ್ತೆ
ಹಲ್ಲೆ ಮತ್ತು ಮಾನಭಂಗ ಯತ್ನ ಪ್ರಕರಣ ಸಂಬಂಧ ದಂಪತಿ ಇಬ್ಬರು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾರೆ. ದೇವರಗುಡಿ ಗ್ರಾಮದ ಸಂಪತ್ ಮತ್ತು ಆದರ್ಶ್ ಎಂದು ಗುರುತು ಪತ್ತೆ ಹಚ್ಚಿದ್ದು, ಇನ್ನಿಬ್ಬರ ಯಾರೆಂದು ತಿಳಿದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ ಸಂಪತ್ ಮತ್ತು ಆದರ್ಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗೃಹ ಸಚಿವರ ಕ್ಷೇತ್ರದಲ್ಲಿ ಅಮಾನವೀಯ ಕೃತ್ಯ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲೇ ಇಂತಹ ಅಮಾನವೀಯ ಕೃತ್ಯ ನಡೆದಿದೆ. ಮೇ 9ರಂದು ರಾತ್ರಿ ಘಟನೆ ನಡೆದಿದೆ. ದಾಳಿಗೊಳಗಾದ ದಂಪತಿ ಮೇ 10ರಂದು ಬೆಳಗ್ಗೆ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಆದರೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?
ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗಿದೆ ಎಂಬ ಆರೋಪ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪ್ರಕರಣ ಸಂಬಂಧ ದಂಪತಿ ನಮ್ಮ ಠಾಣೆಗೆ ಬಂದು ದೂರು ನೀಡಿರಲಿಲ್ಲ. ಇವತ್ತು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ ⇒ ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ – ಹೊಳೆಹೊನ್ನೂರು ಬಳಿ ಭದ್ರಾ ನಾಲೆಯಲ್ಲಿ ಈಜಲು ಹೋದ ಮಕ್ಕಳು ನಾಪತ್ತೆ