SHIVAMOGGA LIVE NEWS | 5 DECEMBER 2022
ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದ ವೇಳೆ ವಿಚಾರಣಾಧೀನ ಕೈದಿ ಬಳಿ ಗಾಂಜಾ ಪತ್ತೆಯಾಗಿದೆ. ಪೊಲೀಸರು ಶೋಧ ಕಾರ್ಯ ನಡೆಸಿದಾಗ 80 ಗ್ರಾಂ ಗಾಂಜಾ (GANJA PACKET) ಸಿಕ್ಕಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಚಾರಣಾಧೀನ ಕೈದಿ ಶಾಹಿದ್ ಖುರೇಷಿ ಬಳಿ ಗಾಂಜಾ ಸಿಕ್ಕಿದೆ. ಚಿಕಿತ್ಸೆಗಾಗಿ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದ ವೇಳೆ ಘಟನೆ ಸಂಭವಿಸಿದೆ.
(GANJA PACKET)
ಶೌಚಾಲಯದಿಂದ ಹೊರಬಂದಾಗ ಅನುಮಾನ
ಶಾಹಿದ್ ಖುರೇಷಿ ಸೇರಿದಂತೆ ಇತರೆ ಕೈದಿಗಳನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ಬಳಿಕ ಶಾಹಿದ್ ಖುರೇಷಿ ಶೌಚಾಲಯಕ್ಕೆ ಹೋಗಿದ್ದ. ಹೊರ ಬಂದಾಗ ಆತನ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಪರಿಶೀಲನೆಗೆ ಮುಂದಾದಾಗ ಶಾಹಿದ್ ಖುರೇಷಿ ರಂಪಾಟ ಮಾಡಿದ್ದಾನೆ. ಭದ್ರತೆಗೆ ಆಗಮಿಸಿದ್ದ ಪೊಲೀಸರು ಆತನನ್ನು ಪರಿಶೀಲನೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವೇಳೆ ಶಾಹಿದ್ ಖುರೇಷಿ ಮುಚ್ಚಿಟ್ಟುಕೊಂಡಿದ್ದ 80 ಗ್ರಾಂ ಗಾಂಜಾ ಪ್ಯಾಕೆಟ್ ಕೆಳಗೆ ಬಿದ್ದಿದೆ. ಅದನ್ನು ವಶಕ್ಕೆ ಪಡೆದಿರುವ ಪೊಲೀಸರು, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಶಾಹಿದ್ ಖುರೇಷಿ ವಿರುದ್ಧ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.
(GANJA PACKET)
ಗುಂಡೇಟು ತಿಂದಿದ್ದ ಖುರೇಷಿ
ರಾಬರಿ ಪ್ರಕರಣಗಳ ಪ್ರಮುಖ ಆರೋಪಿ ಶಾಹಿದ್ ಖುರೇಶಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. 2022ರ ಜೂನ್ 21ರಂದು ಕೆ.ಆರ್.ಪುರಂ ಬಳಿ ಆತ ಇರುವ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆಯ ಕ್ರೈಮ್ ವಿಭಾಗದ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ತೆರಳಿದ್ದರು. ಆತನನ್ನು ಹಿಡಿಯಲು ಹೋದಾಗ ರಮೇಶ್ ಅವರ ಕೈಗೆ ಮತ್ತು ಗುರುನಾಯಕ್ ಅವರ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ. ಕೆಲವೇ ಹೊತ್ತಿನಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಶಾಹಿದ್ ಖುರೇಶಿ ಪತ್ತೆಯಾಗಿದ್ದಾನೆ. ಬಂಧಿಸಲು ತೆರಳಿದ್ದಾಗ, ಪುನಃ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಆತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.
ALSO READ – 5 ತಿಂಗಳು, ಐವರ ಕಾಲಿಗೆ ಗುಂಡು, ಯಾರೆಲ್ಲರ ಕಾಲು ಸೀಳಿದೆ ಗೊತ್ತಾ ಶಿವಮೊಗ್ಗ ಪೊಲೀಸರ ಬುಲೆಟ್?