ಶಿವಮೊಗ್ಗ ಲೈವ್.ಕಾಂ | SAGARA NEWS | 27 ನವೆಂಬರ್ 2021
ಜೋಗ ಜಲಪಾತಕ್ಕೆ ಭೇಟಿ ನೀಡಿದ್ದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಖುಷಿಪಡಿಸಲು ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಲಾಗಿದೆ. ಆದರೆ ರಾಜ್ಯಪಾಲರು ಜೋಗ ವೀಕ್ಷಣೆ ಮಾಡಿದ ಬಳಿಕ ಡ್ಯಾಂ ನೀರು ಜಲಪಾತ ತಲುಪಿದೆ. ಹಾಗಾಗಿ ರಾಜ್ಯಪಾಲರು ತೆಳು ಧಾರೆಯ ಜಲಪಾತವನ್ನಷ್ಟೆ ಕಣ್ತುಂಬಿಕೊಂಡು ಮರಳುವಂತಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶಿವಮೊಗ್ಗ ಪ್ರವಾಸದ ವೇಳೆ ಜೋಗಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಬಾಂಬೆ ಗೆಸ್ಟ್ ಹೌಸ್’ನಲ್ಲಿ ರಾತ್ರಿ ಉಳಿದುಕೊಂಡಿದ್ದರು. ಗುರುವಾರ ಬೆಳಗ್ಗೆ ಜೋಗ ಜಲಪಾತವನ್ನು ವೀಕ್ಷಿಸಿದರು. ಅದರ ವೈಭವ ಕಂಡು ಖುಷಿಪಟ್ಟಿದ್ದರು.
ಇದನ್ನೂ ಓದಿ | ಜೋಗ ಜಲಪಾತ, ತ್ಯಾವರೆಕೊಪ್ಪದ ಹುಲಿ, ಸಿಂಹಧಾಮಕ್ಕೆ ರಾಜ್ಯಪಾಲರ ಭೇಟಿ, ಅಧಿಕಾರಿಗಳ ಜೊತೆ ಸಫಾರಿ, ಫೋಟೊ ಸೆಷನ್
ಜೋಗದಲ್ಲಿ ತೆಳು ಧಾರೆ ಜಲಪಾತ
ಮಳೆ ಇಲ್ಲದಿರುವುದರಿಂದ ಜೋಗ ಜಲಪಾತದಲ್ಲಿ ತೆಳು ಧಾರೆಯನ್ನಷ್ಟೆ ಕಾಣಬಹುದಾಗಿದೆ. ಆದರೆ ರಾಜ್ಯಪಾಲರ ಭೇಟಿ ಹಿನ್ನೆಲೆ ಜಲಪಾತ ಮೈದುಂಬಿ ಹರಿಯುವಂತೆ ಮಾಡಲು ಅಧಿಕಾರಿಗಳು ಯೋಜಿಸಿದ್ದರು. ಅದಕ್ಕಾಗಿ ಜಲಾಶಯದಿಂದ ನೀರು ಬಿಟ್ಟಿದ್ದಾರೆ.
ಎರಡ್ಮೂರು ಗಂಟೆ ಬೇಕು
ರಾಜ್ಯಪಾಲರನ್ನು ಖುಷಿಪಡಿಸಲು ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ಬೆಳಗ್ಗೆ ಸ್ವಲ್ಪ ಪ್ರಮಾಣದ ನೀರು ಹೊರ ಬಿಡಲಾಗಿತ್ತು. ಜಲಾಶಯದಿಂದ ನೀರು ಜಲಪಾತಕ್ಕೆ ತಲುಪಲು ಎರಡರಿಂದ ಮೂರು ಗಂಟೆ ಸಮಯವಕಾಶ ಬೇಕು. ಆದರೆ ಗುರುವಾರ ಬೆಳಗ್ಗೆ ಡ್ಯಾಂನಿಂದ ಹೊರಬಿಟ್ಟ ನೀರು ಜಲಪಾತಕ್ಕೆ ತಲುಪುವ ಮೊದಲು ರಾಜ್ಯಪಾಲರು ಜೋಗ ವೀಕ್ಷಣೆಗೆ ಬಂದಿದ್ದರು.
ಹತ್ತು ನಿಮಿಷ ಜಲಪಾತ ವೀಕ್ಷಣೆ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಳಗ್ಗೆ 7.30ಕ್ಕೆ ಜೋಗ ಜಲಪಾತ ವೀಕ್ಷಣೆಗೆ ಭೇಟಿ ನೀಡಿದ್ದರು. ಹತ್ತು ನಿಮಿಷ ಜಲಪಾತದ ಮುಂದೆ ನಿಂತು ವೈಭವ ಕಣ್ತುಂಬಿಕೊಂಡರು. ಜಲಪಾತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿಗಳ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡರು. ಈ ಸಂದರ್ಭ ಜಲಪಾತದಲ್ಲಿ ತೆಳು ಧಾರೆಯಷ್ಟೆ ಇತ್ತು.
ರಾಜ್ಯಪಾಲರು ಜಲಪಾತ ವೀಕ್ಷಣೆ ಮುಗಿಸಿ ತೆರಳಿದ ಬಳಿಕ ಜೋಗಕ್ಕೆ ಲಿಂಗನಮಕ್ಕಿ ಜಲಾಶಯದ ನೀರು ತಲುಪಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಮೈದುಂಬಿ ಹರಿದಿವೆ ಎಂದು ತಿಳಿದು ಬಂದಿದೆ. ರಾಜ್ಯಪಾಲರ ಭೇಟಿ ಹೊರತು ಜಲಾಶಯದಿಂದ ನೀರು ಹೊರಗೆ ಹರಿಸಲು ಮತ್ತಿನ್ಯಾವ ಕಾರಣವೂ ಈತನಕ ಲಭ್ಯವಾಗಿಲ್ಲ. ಆದರೆ ಅಧಿಕಾರಿಗಳ ಲೆಕ್ಕಾಚಾರ ಉಲ್ಟಾ ಆಗಿದ್ದು, ರಾಜ್ಯಪಾಲರು ತೆರಳಿದ ಬಳಿಕ ಜಲಾಶಯಕ್ಕೆ ನೀರು ತಲುಪಿದೆ.