ಶಿವಮೊಗ್ಗದ ಲೈವ್.ಕಾಂ | HOLEHONNURU NEWS | 2 ಫೆಬ್ರವರಿ 2022
ಕ್ವಿಂಟಾಲ್’ಗಟ್ಟಲೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿತ್ತು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ತರಗನಹಳ್ಳಿ ಗ್ರಾಮದ ಮಲ್ಲಿಕಮ್ಮ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪೊಲೀಸರು ಇವತ್ತು ದಾಳಿ ನಡೆಸಿದ್ದಾರೆ.
ಮನೆ ಮಾಲೀಕರು ಅಲ್ಲಿಲ್ಲ
ಮಲ್ಲಿಕಮ್ಮ ಅವರು ತರಗನಹಳ್ಳಿಯ ಮನೆಯನ್ನು ಬಿಟ್ಟು ಬೇರೆಡೆ ವಾಸವಾಗಿದ್ದರು. ಖಾಲಿ ಇದ್ದ ಮನೆಯಲ್ಲಿ ಜಾವಳ್ಳಿಯ ಮೋಹನ್ ಎಂಬುವವರು ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ
ಮನೆಯಲ್ಲಿ ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿಯನ್ನು ತುಂಬಿ ಇಡಲಾಗಿತ್ತು. 205 ಚೀಲಗಳಲ್ಲಿ 82 ಕ್ವಿಂಟಾಲ್ ಅಕ್ಕಿಯನ್ನು ತುಂಬಿಸಿ ಇರಿಸಲಾಗಿತ್ತು. ಇದರ ಮೌಲ್ಯ 1.88 ಲಕ್ಷ ರೂ. ಎಂದು ಅಂದಾಜ ಮಾಡಲಾಗಿದೆ.
ಹೊಳೆಹೊನ್ನೂರು ಠಾಣೆ ಪಿಎಸ್ಐ ಮತ್ತು ಸಿಬ್ಬಂದಿ ದಾಳಿ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.