ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021
ಕಲ್ಲಂಗೂರಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ ಅಕ್ಕಪಕ್ಕದ ಹಳ್ಳಿಗಳಲ್ಲಿ ಮನೆಗಗಳಿಗೆ ಹಾನಿಯಾಗಿದೆ. ಕೆಲವರು ಗಾಯಗೊಂಡು, ಶಾಕ್ಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ.
ಗುರುವಾರ ರಾತ್ರಿ ಕಲ್ಲಗಂಗೂರಿನ ಕಲ್ಲು ಗಣಿಯಲ್ಲಿ ಭಾರಿ ಸ್ಪೋಟಕ ಸ್ಫೋಟಿಸಿದ ಪರಿಣಾಮ ನೆರೆಹೊರೆಯ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಿಟಕಿ ಗಾಜು ಪುಡಿ ಪುಡಿಯಾಗಿವೆ. ಬಾಗಿಲುಗಳು ಮುರಿದು ಬಿದ್ದಿವೆ.
ಸ್ಪೋಟ ಸಂಭವಿಸಿದ ಗಣಿಗೆ ಅತಿ ಸಮೀಪದ ಮನೆ ಈಶ್ವರ್ ನಾಯ್ಕ್ ಅವರದ್ದು. ಸ್ಫೋಟದ ಸ್ಥಳದಿಂದ ಸುಮಾರು ಅರ್ಧ ಕಿ.ಮೀ.ನಷ್ಟು ದೂರದಲ್ಲಿ ಈ ಮನೆ ಇದೆ. ಇವರ ಮನೆಯ ಗಾಜುಗಳು ಪುಡಿಯಾಗಿ ಮನೆ ತುಂಬಾ ಚೆಲ್ಲಾಪಿಲ್ಲಿಯಾಗಿದೆ. ಬಾಗಿಲು ಮುರಿದಿದೆ. ಮನೆ ಬಿರುಕು ಬಿಟ್ಟಿದೆ. ಪಕ್ಕದಲ್ಲೇ ಅವರ ತಾಯಿ ಮನೆ ಇದ್ದು, ಹೆಂಚುಗಳು ಜರುಗಿವೆ. ಈ ಮನೆಯೂ ಬಿರುಕು ಬಿಟ್ಟಿದೆ.
ಹಣಸೋಡು, ಅಬ್ಬಲಗೆರೆಯು ಗಢಗಢ
ಪಕ್ಕದ ಹುಣಸೋಡು, ಅಬ್ಬಲಗೆರೆಯಲ್ಲೂ ಮನೆಗಳಿಗೆ ಹಾನಿಯಾಗಿದೆ. ಬಿರುಕು ಕಾಣಿಸಿಕೊಂಡು, ಗಾಜುಗಳು ಪುಡಿಯಾದ ವರದಿಯಾಗಿದೆ. ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೆಲವರಿಗೆ ಗಾಯ, ಹಲವರಿಗೆ ಶಾಕ್
ಸ್ಫೋಟದಿಂದಾಗಿ ಹಲವರಿಗೆ ಶಾಕ್ ಆಗಿದೆ. ವೃದ್ಧರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಗಾಜು ಒಡೆದು, ಬಾಗಿಲು ಮುರಿದು ಬಿದ್ದು ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಇದೇನು ಹೊಸತಲ್ಲ..!
ಕಲ್ಲಗಂಗೂರಿನಲ್ಲಿ ಈಗ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದರಿಂದ ದೇಶದ ಗಮನ ಸೆಳೆದಿದೆ. ಆದರೆ ಸುತ್ತಮುತ್ತ ನೂರಾರು ಗಣಿ, ಕ್ರಷರ್ಗಳಿವೆ. ಪ್ರತಿದಿನ ಬೆಳಗ್ಗೆ ಮದ್ಯಾಹ್ನ, ಸಂಜೆ ವೇಳೆಗೆ ಇಲ್ಲಿ ಸ್ಫೋಟ ಸಂಭವಿಸುತ್ತಲೆ ಇರುತ್ತದೆ. ಈ ಸ್ಫೋಟದಿಂದಾಗಿ ಮನೆಗಳು ಬಿರುಕು ಬಿಡುತ್ತಲೆ ಇವೆ. ಸ್ಪೋಟದ ರಭಸಕ್ಕೆ ಕಲ್ಲುಗಳು ಪುಡಿಯಾಗಿ ಹಾರಿ ಬಂದು ಮನೆಗಳ ಮೇಲೆ ಬಿದ್ದ ಉದಾಹರಣೆಗಳಿವೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]