ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2020
ತೀವ್ರ ವಿರೋಧ, ಪ್ರತಿಭಟನೆಯ ನಡುವೆಯು ಶಿವಮೊಗ್ಗದ ಇಮಾಮ್ ಬಾಡಾದಲ್ಲಿ 28 ಮನೆಗಳನ್ನು ಮಹಾನಗರ ಪಾಲಿಕೆ ತೆರವು ಮಾಡಿದೆ. ಮನೆಗಳ ತೆರವು ವಿಚಾರದಲ್ಲಿ ಇಮಾಮ್ ಬಾಡಾ ಪ್ರದೇಶದಲ್ಲಿ ಬಿಗುವಿನ ವಾತಾವರಣವಿತ್ತು. ಆದರೂ ಪಾಲಿಕೆ ಮನೆಗಳ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.
ಮನೆಗಳ ತೆರವಿಗೆ ಮುಂದಾಗಿದ್ದೇಕೆ?
ತುಂಗಾ ಹೊಳೆ ಭರ್ತಿಯಾದಾಗ ಇಮಾಂ ಬಾಡಾದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಲವು ಮನೆಗಳು ಜಲಾವೃತವಾಗುತ್ತವೆ. ಇದೇ ಕಾರಣಕ್ಕೆ ಮನೆಗಳ ತೆರವು ಕಾರ್ಯಾಕ್ಕೆ ಪಾಲಿಕೆ ಮುಂದಾಗಿತ್ತು. ಇವತ್ತು 27 ಮನೆಗಳ ತೆರವು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ವಿರೋಧ, ಪಾಲಿಕೆ ವಿರುದ್ಧ ಆಕ್ರೋಶ
28 ಮನೆಗಳ ತೆರವಿಗೆ ಮುಂದಾದ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವಾರ್ಡ್ ಕಾರ್ಪೊರೇಟರ್ ಶಬಾನಾ ಖಾನಂ ಅವರು ಜನರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದರ ಬೆನ್ನಿಗೆ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್, ಕಾರ್ಪೊರೇಟರ್ ನಾಗರಾಜ್ ಕಂಕಾರಿ, ಕಾಂಗ್ರೆಸ್ ಮುಖಂಡ ಕೆ.ರಂಗನಾಥ್, ಜಿಲನ್, ಮಜರ್, ಸಿದ್ದಪ್ಪ ಅವರು ಪ್ರತಿಭಟನಾಕಾರರಿಗೆ ಬೆಂಬಲವಾಗಿ ನಿಂತರು.
ಫೋನಿಗೆ ಸಿಗದ ಕಮಿಷನರ್
ಈ ನಡುವೆ ನಾಲ್ಕು ಮನೆಗಳ ತೆರವಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಹೇಳಲಾಗಿತ್ತು. ಹಾಗಾಗಿ ಉಳಿದ ಮನೆಗಳ ತೆರವಿಗೆ ಪಾಲಿಕೆ ಮುಂದಾಗಿತ್ತು. ಆದರೆ ನಿನ್ನೆಯಷ್ಟೇ ನಿವಾಸಿಗಳು ಕಮಿಷನರ್ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆ ಈಡೇರಿಸುವವರೆಗೆ ಮನೆ ತೆರವು ಮಾಡಿಸದಂತೆ ಮನವಿ ಮಾಡಿದ್ದರು. ಹಾಗಿದ್ದೂ ಇವತ್ತು ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಪಾಲಿಕೆ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಜನ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳೀಯರು ಕಮಿಷನರ್ ಅವರನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ ಕಮಿಷನರ್ ಕರೆಯನ್ನೇ ಸ್ವೀಕರಿಸಲಿಲ್ಲ.
ಜನರ ಡಿಮಾಂಡ್ ಏನು?
ಇಲ್ಲಿಂದ ಸ್ಥಳಾಂತರ ಆಗುವವರಿಗೆ ಐಹೊಳೆ ಮತ್ತು ರಾಮಿನಕೊಪ್ಪ ನಡುವೆ ಮಹಾನಗರ ಪಾಲಿಕೆ ಜಾಗ ಗುರುತಿಸಿದೆ. ಆದರೆ ಈ ಜಾಗದಲ್ಲಿ ಯಾವುದೆ ಮೂಲ ಸೌಕರ್ಯ ಒದಗಿಸಿಲ್ಲ. ಅಲ್ಲದೆ ಆ ಜಾಗವನ್ನು ಖಾಸಗಿಯವರು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅಲ್ಲಿಗೆ ಹೋದರೆ ಸಮಸ್ಯೆ ಹೆಚ್ಚು ಎಂದು ಜನರು ಪ್ರತಿಭಟನೆ ನಡೆಸಿದರು. ಮೂಲ ಸೌಕರ್ಯ ಒದಗಿಸಿದ ಬಳಿಕವೆ ಆ ಜಾಗಕ್ಕೆ ಸ್ಥಳಾಂತರ ಆಗುವುದಾಗಿ ಪಟ್ಟು ಹಿಡಿದರು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸಂಜೆ ವೇಳೆಗೆ ಬೇಡಿಕೆ ಈಡೇರಿಸುವ ಭರವಸೆ ನೀಡದರು. ಆ ಬಳಿಕ ಜನ ಮನೆ ತೆರವು ಮಾಡಲು ಒಪ್ಪಿಗೆ ಸೂಚಿಸಿದರು.
ಸಂಜೆ ವೇಳೆಗೆ ಮನೆಗಳ ತೆರವು
ನಿಗದಿಯಂತೆ ಸಂಜೆ ವೇಳೆಗೆ ಇಮಾಮ್ ಬಾಡಾದ 28 ಮನೆಗಳನ್ನು ಮಹಾನಗರ ಪಾಲಿಕೆ ತೆರವುಗೊಳಿಸಿದೆ. ಪ್ರತಿಭಟನೆ ತಣ್ಣಗಾಗುತ್ತಿದ್ದಂತೆ ಮಹಾನಗರ ಪಾಲಿಕೆ ಜೆಸಿಬಿಗಳು ಮನೆಗಳನ್ನು ನೆಲಸಮ ಮಾಡಿದವು.
ಕಾರ್ಯಾಚರಣೆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]