SHIVAMOGGA LIVE NEWS | JAIL | 28 ಮೇ 2022
ಹಳೆ ದ್ವೇಷದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಆರೋಪಿಗಳಿಗೆ ಜೈಲು ಶಿಕ್ಷೆಯಾಗಿದೆ. ವಿಚಾರಣೆ ನಡೆಸಿದ ಶಿವಮೊಗ್ಗ ನ್ಯಾಯಾಲಯದ ನ್ಯಾಯಾಧೀಶರು, ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟಿಸಿದ್ದಾರೆ.
ಹರೀಶ್ (24) ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಮಂಜುನಾಥ ಅಲಿಯಾಸ್ ಕಟ್ಟಿಂಗ್ ಶಾಪ್ ಮಂಜ, ಅನಿಲ, ಪ್ರಶಾಂತ್ ಅಲಿಯಾಸ್ ಕೊಡ್ಲಿ ಪ್ರಶಾಂತ್ ಎಂಬುವವರಿಗೆ ಜೈಲು ಶಿಕ್ಷೆಯಾಗಿದೆ.
ಏನಿದು ಪ್ರಕರಣ?
ಶಿವಮೊಗ್ಗದ ಹೊಸಮನೆ ಬಡಾವಣೆಯ ಚಾನಲ್ ಏರಿಯಾದಲ್ಲಿ ನಡೆದು ಹೋಗುತ್ತಿದ್ದ ಹರೀಶ್ ಮೇಲೆ ಮಚ್ಚಿನಿಂದ ದಾಳಿ ನಡೆಸಲಾಗಿತ್ತು. ಹಳೆ ದ್ವೇಷದ ಹಿನ್ನೆಲೆ ಮಾರಣಾಂತಿಕವಾಗಿ ದಾಳಿ ಮಾಡಲಾಗಿತ್ತು. 2016ರ ಜೂನ್ 17ರಂದು ಘಟನೆ ಸಂಭವಿಸಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೂವರ ವಿರುದ್ಧ ಚಾರ್ಜ್ ಶೀಟ್
ಆಗ ದೊಡ್ಡಪೇಟೆ ಠಾಣೆ ಪಿಎಸ್ಐ ಆಗಿದ್ದ ಅಭಯ ಪ್ರಕಾಶ್ ಸೋಮನಾಳ್ ಅವರು ತನಿಖೆ ನಡೆಸಿದರು. 2017ರಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮನು ಅವರು ವಿಚಾರಣೆ ನಡೆಸಿದರು. ಆರೋಪ ಸಾಭೀತಾದ ಹಿನ್ನೆಲೆ ಮೂವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
ಕೊಲೆ ಯತ್ನ (ಐಪಿಸಿ ಸೆಕ್ಷನ್ 307) ಆರೋಪ ಸಾಬೀತಾದ ಹಿನ್ನೆಲೆ 7 ವರ್ಷ ಕಠಿಣ ಜೈಲು ಶಿಕ್ಷೆ, 40 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ 4 ತಿಂಗಳು ಹೆಚ್ಚುವರಿಯಾಗಿ ಸಾದ ಜೈಲು ಶಿಕ್ಷೆ. ಇನ್ನು, ಶಸ್ತ್ರಾಸ್ತ್ರಗಳಿಂದ ಉದ್ದೇಶಪೂರ್ವಕಾಗಿ ಹಲ್ಲೆ (ಐಪಿಸಿ ಸೆಕ್ಷನ್ 324) ಆರೋಪ ಸಾಬೀತಾದ ಹಿನ್ನೆಲೆ 2 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.
ರತ್ನಮ್ಮ ಅವರು ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ ರೈಲ್ವೆ ನಿಲ್ದಾಣ ಸಮೀಪ ಫೋನ್ ಪೇ ಮಾಡಿಸಿಕೊಂಡು ಹಣ ರಾಬರಿ..!
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.