ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022
ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ಬುಲೆಟ್ ಕ್ಯಾಮರಾ ಮತ್ತು ಟ್ಯೂಬ್ ಲೈಟ್’ಗಳಿಗೆ ಹಾನಿ ಮಾಡಿದ್ದಾನೆ. ಆತನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರಾವತಿ ನಗರದ ಗಗನ್ ಅಲಿಯಾಸ್ ಆನಂದ ಎಂಬ ವಿಚಾರಣಾಧೀನ ಖೈದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಹೇಗಾಯ್ತು ಘಟನೆ?
ಕೇಂದ್ರ ಕಾರಾಗೃಹದ ಶರಾವತಿ ವಿಭಾಗದಲ್ಲಿ ಖೈದಿಗಳು ಮತ್ತು ಸೆಲ್’ಗಳಲ್ಲಿ ದೈನಂದಿನ ತಪಾಸಣೆ ನಡೆಸಲಾಗುತ್ತಿತ್ತು. ಅನಧಿಕೃತ ವಸ್ತುಗಳು ತಂದಿಟ್ಟುಕೊಳ್ಳುವುದನ್ನು ತಡೆಯಲು ಜೈಲು ಸಿಬ್ಬಂದಿ ತಪಾಸಣೆ ಮಾಡುತ್ತಿದ್ದರು. ಆಗ ದಾಂಧಲೆ ಶುರು ಮಾಡಿದ ವಿಚಾರಣಾಧೀನ ಕೈದಿ ಗಗನ್, ಶರಾವತಿ ವಿಭಾಗದಲ್ಲಿದ್ದ 5 ಬುಲೆಟ್ ಕ್ಯಾಮರಾಗಳು ಮತ್ತು ಟ್ಯೂಬ್ ಲೈಟ್ ಗಳನ್ನು ಒಡೆದು ಹಾಕಿದ್ದಾನೆ.
ಸರ್ಕಾರದ ಆಸ್ತಿ ಹಾನಿಗೊಳಿಸಿದ ಹಿನ್ನೆಲೆ ಜೈಲು ಸಿಬ್ಬಂದಿ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.