ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಆಗಸ್ಟ್ 2020
ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಮುದಾಯದ ಜನರಿಗೆ ಈವರೆಗೂ ಕೊಟ್ಟಿರುವ ಸಾಲ ಮತ್ತು ಅದರ ಬಡ್ಡಿ ಮನ್ನಾ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ನಂಜುಂಡಿ, ಕರೋನ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮುದಾಯದವರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕೆಲಸ ಮಾಡಲು ಸಮುದಾಯದ ಜನರು ಸಿದ್ಧವಿದ್ದಾರೆ. ಆದರೆ ಕೆಲಸ ತೆಗೆದುಕೊಳ್ಳಲು ಯಾರು ಬರುತ್ತಿಲ್ಲ. ಹಾಗಾಗಿ ಸಾಲ ಮನ್ನಾ ಮಾಡುವ ಅಗತ್ಯವಿದೆ ಎಂದರು.
ವಿಶ್ವಕರ್ಮ ಅಭಿವೃದ್ಧಿ ನಿಗಮ ಆರಂಭವಾಗಿ ಆರು ವರ್ಷವಾಗಿದೆ. ಈ ಅವಧಿಯಲ್ಲಿ 85 ಕೋಟಿ ರೂ. ಸಾಲ ನೀಡಲಾಗಿದೆ. ಇದನ್ನು ಮನ್ನಾ ಮಾಡಬೇಕಿದೆ. ಅಲ್ಲದ ಕನಿಷ್ಠ 500 ಜನರಿಗೆ ಸಾಲ ನೀಡಲು ಅನುಕೂಲ ಆಗುವಂತೆ ಅನುದಾನ ನೀಡಬೇಕು. ಸದ್ಯ 1.06 ಲಕ್ಷ ಮಂದಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಪ್ಯಾಕೇಜ್ನಲ್ಲಿ ನಮಗೇನು ಸಿಕ್ಕಿಲ್ಲ
ಕರೋನ ಸಂಕಷ್ಟ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ಯಾಕೇಜ್ನಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಯಾವುದೆ ನೆರವು ಸಿಕ್ಕಿಲ್ಲ. ಮರಗೆಲಸ, ಕಬ್ಬಿಣದ ಕೆಲಸ, ಚಿನ್ನದ ಕೆಲಸ ಸೇರಿದಂತೆ ಐದು ಕಸುಬು ಮಾಡುತ್ತಿದ್ದರು, 1610 ಕೋಟಿ ರು. ಪ್ಯಾಕೇಜ್ನಲ್ಲಿ ನೆರವು ಸಿಕ್ಕಿಲ್ಲ. ಈ ಬಗ್ಗೆ ಯಡಿಯೂರಪ್ಪ ಅವರಿಗೂ ತಿಳಿಸಲಾಗಿದೆ. ನೆರವಿನ ಭರವಸೆ ನೀಡದ್ದಾರೆ ಅಂತಾ ಕೆ.ಪಿ.ನಂಜುಂಡಿ ತಿಳಿಸಿದರು.
ಜಾತಿ ಗಣತಿ ವರದಿ ಬಹಿರಂಗಗೊಳ್ಳಲಿ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಜಾತಿ ಜನ ಗಣಿತ ಮಾಡಿದ್ದರು. ಈವರೆಗು ಆ ವರದಿ ಬಿಡುಗಡೆಯಾಗಿಲ್ಲ. ಯಾವ್ಯಾವ ಭಾಗದಲ್ಲಿ ಯಾವ್ಯಾವ ಜಾತಿಯವರು ಎಷ್ಟಿದ್ದಾರೆ ಅನ್ನುವುದು ತಿಳಿಯುತ್ತಿಲ್ಲ. ಹಿಂದುಳಿದ ವರ್ಗದವರ ಜನಸಂಖ್ಯೆ ಎಷ್ಟು ಅಂತಾ ತಿಳಿಯುವವರೆಗೆ ಸಾಮಾಜಿಕ ನ್ಯಾಯ ಅಸಾಧ್ಯ. ಹಾಗಾಗಿ ಈ ವರದಿಯನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಕೆ.ಪಿ.ನಂಜುಂಡಿ ಮನವಿ ಮಾಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]