ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2020
ಕೋವಿಡ್ ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಸಲುವಾಗಿ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಆಸ್ಪತ್ರೆಯೊಂದರ ಕೋವಿಡ್ ವಾರ್ಡ್ನಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಗ್ರಂಥಾಲಯಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಷಡಾಕ್ಷರಿ, ಗ್ರಂಥಾಲಯದಿಂದ ಕೋವಿಡ್ ರೋಗಿಗಳ ಮಾನಸಿಕ ಒತ್ತಡ ದೂರವಾಗುವುದಲ್ಲದೆ ವಿಶೇಷ ಪುಸ್ತಕಗಳ ಓದಿನಿಂದ ಜ್ಞಾನವೂ ಹೆಚ್ಚಾಗುವುದು ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್ ಮಾತನಾಡಿ, ಕೊರೋನಾ ಪಾಸಿಟಿವ್ ಬಂದರೆ ಸಾಕು ಅನೇಕರು ಆತಂಕ ಪಡುತ್ತಾರೆ. ಅದರಲ್ಲೂ ಕೋವಿಡ್ ವಾರ್ಡ್ನ ವಾತಾವರಣಕ್ಕೆ ಹೆದರುತ್ತಾರೆ ಹಾಗೂ ಅಕ್ಕಪಕ್ಕದ ಬೆಡ್ನವರು ಮೃತಪಟ್ಟರೆ ಸಂಪೂರ್ಣ ಕುಗ್ಗಿ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಮಾನಸಿಕ ಒತ್ತಡದಿಂದ ದೂರವಾಗಲು ಪುಸ್ತಕಗಳು ನೆರವಾಗುತ್ತವೆ. ಈ ನಿಟ್ಟಿನಲ್ಲಿ ಗ್ರಂಥಾಲಯ ಸಹಕಾರಿ ಎಂದರು.
ಜಿಲ್ಲಾ ಸರ್ಜನ್ ಡಾ. ರಘುನಂದನ್ ಮಾತನಾಡಿ, ಕೋವಿಡ್ ರೋಗಿಗಳ ಮನಸ್ಸನ್ನು ಕಾಯಿಲೆ ಕುರಿತ ಯೋಚನೆಯಿಂದ ಬೇರೆಡೆ ಸೆಳೆಯಲು ಹಾಗೂ ಜ್ಞಾನಾಭಿವೃದ್ಧಿಗೆ ಈ ಗ್ರಂಥಾಲಯ ಸಹಕಾರಿ. ಸರ್ಕಾರಿ ನೌಕರರ ಸಂಘ ಹಾಗೂ ವೈದ್ಯಕೀಯ ನೌಕರರ ಸಂಘ ಸೇರಿ ಉತ್ತಮ ಕೆಲಸ ಮಾಡಿದೆ ಎಂದರು.
ಜಿಲ್ಲಾ ಸರ್ಕಾರಿ ವೈದ್ಯಕೀಯ ನೌಕರರ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಕೋವಿಡ್ ರೋಗಿಗಳಿಗಾಗಿ ಗ್ರಂಥಾಲಯ ಸ್ಥಾಪನೆ ಮಾಡುತ್ತಿರುವುದು ಇಡೀ ದೇಶದಲ್ಲೇ ಮೊದಲು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹಾಗೂ ಮೆಗ್ಗಾನ್ ವೈದ್ಯಾಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್, ವಿಪ್ರ ನೌಕರರ ಸಂಘ, ರಾಷ್ಟ್ರೋತ್ತಾನ ಬಳಗ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಗ್ರಂಥಾಲಯಕ್ಕೆ ಪುಸ್ತಗಳನ್ನು ನೀಡಿವೆ ಎಂದರು. ಕಾರ್ಯಕ್ರಮದಲ್ಲಿ ಹೆಚ್.ಕೆ.ಕೇಶವ ಮೂರ್ತಿ, ವೈದ್ಯಕೀಯ ಸಂಘದ ಡಾ. ಹೇಮಲತಾ, ಪ್ರಭಾಕರ್, ಶಾಂತರಾಜ್, ಮತ್ತಿತರರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]