ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಎರಡು ಸಿಂಹಗಳ ನಡುವೆ ಕಾದಾಟವಾಗಿದೆ. ಘಟನೆಯಲ್ಲಿ ಸಿಂಹಿಣಿಯೊಂದು ಸಾವನ್ನಪ್ಪಿದೆ. ಇದರಿಂದ ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ 5ಕ್ಕೆ ಕುಸಿದಿದೆ.
ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಮಾನ್ಯಾ (11) ಎಂಬ ಸಿಂಹಿಣಿ ಸಾವನ್ನಪ್ಪಿದೆ. ಸೋಮವಾರ ಮಾನ್ಯಾಳ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ವಾರದ ಹಿಂದೆ ಕಾದಾಟ
ಸಿಂಹಧಾಮದ ಯಶವಂತ ಎಂಬ ಸಿಂಹದ ಜೊತೆಗೆ ಮಾನ್ಯಾ ಕಾದಾಟ ನಡೆಸಿತ್ತು. ಒಂದು ವಾರದ ಹಿಂದೆ ಇವೆರಡು ಸಿಂಹಗಳ ನಡುವೆ ಕಾದಾಟವಾಗಿತ್ತು. ‘ಕಾದಾಟದ ಹಿನ್ನೆಲೆಯಲ್ಲಿ ಎರಡು ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಮಾನ್ಯಾ ಸಾವನ್ನಪ್ಪಿದೆ’ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಚಂದ್ರ ತಿಳಿಸಿದ್ದಾರೆ.
2011ರಲ್ಲಿ ಶಿವಮೊಗ್ಗಕ್ಕೆ ಬಂದಿತ್ತು
ಸಿಂಹಿಣಿ ಮಾನ್ಯಾಳನ್ನು 2011ರಲ್ಲಿ ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ತರಲಾಗಿತ್ತು. ಮೈಸೂರು ಮೃಗಾಲಯದಿಂದ ಆರ್ಯ, ಮಾಲಿನಿ ಮತ್ತು ಮಾನ್ಯಾ ಸಿಂಹಗಳು ಇಲ್ಲಿಗೆ ಬಂದಿದ್ದವು. ಹಾಗಾಗಿ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಮೂರು ಗಂಡು, ಮೂರು ಹೆಣ್ಣು ಸಿಂಹಗಳು ಇದ್ದವು. ಈಗ ಮಾನ್ಯಾ ಸಾವನ್ನಪ್ಪಿರುವುದರಿಂದ ಮೃಗಾಲಯದಲ್ಲಿ ಸಿಂಹಗಳ ಸಂಖ್ಯೆ ಐದಕ್ಕೆ ಕುಸಿದಿದೆ.