SHIVAMOGGA LIVE NEWS | 24 APRIL 2023
SHIMOGA : ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayuktha Raid) ನಡೆಸಿದ್ದಾರೆ. ಶಿವಮೊಗ್ಗದಲ್ಲಿಯು ನಿವೃತ್ತ ಅರಣ್ಯಾಧಿಕಾರಿ ಮತ್ತು ಶಿವಮೊಗ್ಗದ ಹಿಂದಿನ ತಹಶೀಲ್ದಾರ್ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅರಣ್ಯಾಧಿಕಾರಿ ಮನೆ ಮೇಲೆ ದಾಳಿ
ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್ಓ ಆಗಿದ್ದ ಐ.ಎಂ.ನಾಗರಾಜ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayuktha Raid) ಮಾಡಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಡಿಸೆಂಬರ್ 31ರಂದು ಐ.ಎಂ.ನಾಗರಾಜ್ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಕೆಲವು ದಿನದ ಹಿಂದಷ್ಟೆ ಬಿಜೆಪಿ ಸೇರ್ಪಡೆಯಾಗಿದ್ದರು.
ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ನಲ್ಲಿಯು ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತಹಶೀಲ್ದಾರ್ ಸಂಬಂಧಿ ಮನೆಯಲ್ಲಿ ಶೋಧ
ಇನ್ನು, ಶಿವಮೊಗ್ಗದ ಹಿಂದಿನ ತಹಶೀಲ್ದಾರ್ ನಾಗರಾಜ್ ಅವರ ಮನೆ ಮೇಲೆಯೂ ಲೋಕಾಯುಕ್ತ ದಾಳಿಯಾಗಿದೆ. ಚುನಾವಣೆಗು ಮೊದಲು ನಾಗರಾಜ್ ಅವರನ್ನು ಶಿವಮೊಗ್ಗದಿಂದ ವರ್ಗಾಯಿಸಲಾಗಿತ್ತು. ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಹಶೀಲ್ದಾರ್ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಶಿಕಾರಿಪುರದಲ್ಲಿರುವ ನಾಗರಾಜ್ ಅವರ ಸಂಬಂಧಿಯ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜೈಲಿನ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಕುಟುಂಬದವರ ಅನುಮಾನ