ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಜನವರಿ 2022
ತುಂಗಾ ಸೇತುವೆಯಿಂದ ಹೊಳಗೆ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಸಮೀಪದಲ್ಲಿ ಇದ್ದ ಟ್ರಾಫಿಕ್ ಎಎಸ್ಐ ಒಬ್ಬರ ಸಮಯ ಪ್ರಜ್ಞೆಯಿಂದಾಗಿ, ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಜುನಾಥ ಎಂಬಾತ ಗುರುವಾರ ರಾತ್ರಿ ತುಂಗಾ ನದಿಯ ಹಳೆ ಸೇತುವೆ ಮೇಲಿಂದ ಜಿಗಿದಿದ್ದಾನೆ. ಈತನು ಹೊಳೆಹೊನ್ನೂರು ಬಳಿಯ ಅರಹತೊಳಲು ಕೈಮರದವನು ಎಂದು ಹೇಳಲಾಗುತ್ತಿದೆ. ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂದು ತಿಳಿದು ಬಂದಿಲ್ಲ.
ಸೊಂಟಕ್ಕೆ ಗಂಭೀರ ಪೆಟ್ಟು
ಹೊಳೆಯಲ್ಲಿ ನೀರಿನ ಹರಿವು ಕಡಿಮೆ ಇದೆ. ಹಾಗಾಗಿ ಮಂಜುನಾಥ ಹೊಳೆಗೆ ಜಿಗಿಯುತ್ತಿದ್ದಂತೆ ಬಂಡೆಗಳು ಅಪ್ಪಳಿಸಿವೆ. ಇದರಿಂದ ಆತನ ಸೊಂಟದ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ. ಮಂಜನಾಥನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಎಸ್ಐ ಕರ್ತವ್ಯ ಪ್ರಜ್ಞೆ
ಇನ್ನು, ಮಂಜುನಾಥ ಸೇತುವೆಯಿಂದ ಜಿಗಿಯುತ್ತಿದ್ದಂತೆ ಟ್ರಾಫಿಕ್ ಠಾಣೆ ಎಎಸ್ಐ ಶ್ರೀನಿವಾಸ್ ರಕ್ಷಣೆಗೆ ಧಾವಿಸಿದ್ದಾರೆ. ಎಎಸ್ಐ ಶ್ರೀನಿವಾಸ್ ಅವರು ಸೇತುವೆ ಬಳಿ ನಿಂತಿದ್ದರು. ಆಗ ಮಂಜುನಾಥ ಹೊಳೆಗೆ ಜಿಗಿದಿದ್ದಾನೆ. ಕೂಡಲೆ ಶ್ರೀನಿವಾಸ್ ಅವರು ಆಟೋ ಚಾಲಕರಾದ ಅರ್ಜುನ್ ಮತ್ತು ಕಾಂತ ಅವರನ್ನು ಕರೆದುಕೊಂಡು ಸೇತುವೆಯ ಕೆಳಗಿಳಿದು ಮಂಜುನಾಥನ ರಕ್ಷಣೆ ಮಾಡಿದ್ದಾರೆ.
ಆಟೋದಲ್ಲೇ ಮಂಜುನಾಥನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.