ಶಿವಮೊಗ್ಗ ಲೈವ್.ಕಾಂ | HANAGERE NEWS | 27 JUNE 2021
ಹಣಗೆರೆ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕರೋನಾ ಸಂಪೂರ್ಣ ಕಡಿಮೆಯಾದ ಬಳಿಕ 15 ದಿನದೊಳಗೆ ಕ್ಷೇತ್ರದ ಶಾಸಕ ಅರಗ ಜಾನೇಂದ್ರ, ಪ್ರಮುಖ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹಣಗೆರೆಗೆ ಭೇಟಿ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ದೇವಾಲಯದ ವಾತಾವರಣವನ್ನು ವೀಕ್ಷಿಸಿದರು. ಬಳಿಕ ಸಭೆ ನಡೆಸಿದ ಅವರು, ಇಡೀ ರಾಜ್ಯದಲ್ಲೇ ಹಣಗೆರೆ ವಿಶಿಷ್ಟವಾದ ಸ್ಥಳವಾಗಿದೆ. ಒಂದೇ ಜಾಗದಲ್ಲಿ ದರ್ಗಾ ಹಾಗೂ ದೇವಸ್ಥಾನ ಇರುವುದು ಮಾದರಿಯಾಗಿದೆ. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕಿದೆ ಎಂದರು.
ಶುದ್ಧ ನೀರು, ಪ್ರವಾಸಿಗರು ಉಳಿಯಲು ಜಾಗ
ಶಾಸಕ ಆರಗ ಜ್ಞಾನೇಂದ್ರ ಹಣಗೆರೆಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆಯಿಂದ ಏನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಅವರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ನೆರವು ನೀಡಲಾಗುವುದು ಎಂದು ಹೇಳಿದರು.
ಶುದ್ಧ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಬೇಕಿದೆ. ದೂರದಿಂದ ಆಗಮಿಸುವ ಪ್ರವಾಸಿಗರು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಊಟೋಪಚಾರ ಒದಗಿಸಬೇಕು. ಇಲ್ಲೊಂದು ಕಲ್ಯಾಣ ಮಂದಿರ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಬಹುದು ಎಂದರು.
ದೇಗುಲಗಳ ಪ್ರತಿ ಪೈಸೆಗೂ ಲೆಕ್ಕ
ನಾನು ಮುಜರಾಯಿ ಸಚಿವನಾದ ಬಳಿಕ ಪ್ರತಿ ದೇವಸ್ಥಾನದ ಆಡಳಿತದಲ್ಲೂ ಪಾರದರ್ಶಕತೆ ತರಲು ಮುಂದಾಗಿದ್ದೇನೆ. ದೇವಾಲಯಗಳಲ್ಲಿ ಭಕ್ತರು ನೀಡುವ ಪತಿ ಪೈಸೆಗೂ ಲೆಕ್ಕ ಇಡಬೇಕು. ಕಾಣಿಕೆ ಹಣ ಸದ್ಬಳಕೆಯಾಗಬೇಕು ಎಂದು ಶ್ರೀನಿವಾಸ ಪೂಜಾರಿ ಹೇಳಿದರು. ಸರ್ಕಾರದ ಅನುದಾನದೊಂದಿಗೆ ದೇವಾಲಯದಲ್ಲಿ ಸಂಗ್ರಹವಾಗುವ ಕಾಣಿಕೆ ಹಣವನ್ನು ಬಳಸಿಕೊಂಡು ಹಣಗೆರೆಕಟ್ಟೆಯನ್ನು ಮಾದರಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವ ಎಲ್ಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ಶಾಸಕ ಆರಗ ಜ್ಞಾನೇಂದ್ರ, ಜಿಪಂ ಮಾಜಿ ಅಧ್ಯಕ್ಷ ಅಶೋಕಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ತಹಸೀಲ್ದಾರ್ ಶ್ರೀಪಾದ ರಾವ್ ಸೇರಿದಂತೆ ಹಲವರು ಇದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]