ಶಿವಮೊಗ್ಗ ಲೈವ್.ಕಾಂ |SHIKARIPURA NEWS | 25 NOVEMBER 2020
ಈ ಊರಲ್ಲಿ ಬೈಕ್ ಓಡಿಸೋಕೆ ಹೆದರುತ್ತಿದ್ದಾರೆ ಜನ. ಟ್ರ್ಯಾಕ್ಟರ್ ಹತ್ತಿದವರಂತು ಆಸ್ಪತ್ರೆಗೆ ಹೋಗೋದು ಪಕ್ಕಾ. ಇದಕ್ಕೆಲ್ಲ ಕಾರಣ ಒಂದು ಮಂಗ.
ಶಿಕಾರಿಪುರ ತಾಲೂಕು ಶೀರಿಹಳ್ಳಿ ತಾಂಡದ ಜನ ಮಂಗವೊಂದರ ಕಾಟದಿಂದ ರೋಸಿ ಹೋಗಿದ್ದಾರೆ. ಯಾವಾಗ, ಎಲ್ಲಿ, ಯಾರ ಮೇಲೆ ದಾಳಿ ಮಾಡುತ್ತದೋ ಎಂಬ ಆತಂಕದಿಂದ ದಿನ ದೂಡುವಂತಾಗಿದೆ.
ಬೈಕ್, ಟ್ರಾಕ್ಟರ್ ಕಂಡರೆ ಅಟ್ಯಾಕ್
ಶೀರಿಹಳ್ಳಿ ತಾಂಡದಲ್ಲಿರುವ ಮಂಗಕ್ಕೆ ಬೈಕು, ಟ್ರ್ಯಾಕ್ಟರ್ ಕಂಡರೆ ವಿಪರೀತ ಸಿಟ್ಟು. ಇವುಗಳ ಮೇಲೆ ಸವಾರಿ ಮಾಡುವವರ ಮೇಲೆ ದಾಳಿ ನಡೆಸಿ, ಕಚ್ಚಿ ಹೋಗುತ್ತಿದೆ. ಜಮೀನು ಕೆಲಸಕ್ಕೆ ಟ್ರಾಕ್ಟರ್ ಕೊಂಡೊಯ್ಯುತ್ತಿದ್ದ ಕುಮಾರ್ ನಾಯ್ಕ ಅವರ ಮೇಲೆ ಮಂಗಳವಾರ ಮಂಗ ದಾಳಿ ಮಾಡಿದೆ. ಇದಕ್ಕೂ ಮೊದಲು ಬೈಕ್ನಲ್ಲಿ ತೆರಳುತ್ತಿದ್ದ ಮೀನು ವ್ಯಾಪಾರಿ ತುಳಚ ನಾಯ್ಕ ಮೇಲೂ ಅಟ್ಯಾಕ್ ಮಾಡಿದೆ. ಈ ಮೊದಲು ಇನ್ನೂ ಮೂರ್ನಾಲ್ಕು ಮಂದಿ ಮೇಲೆ ಮಂಗ ದಾಳಿ ಮಾಡಿದೆ.
ದಾಳಿಯಾದರೆ ಹೊಲಿಗೆ ಪಕ್ಕಾ
ಮಂಗದ ದಾಳಿ ತುತ್ತಾದವರಿಗೆ ಗಂಭೀರ ಗಾಯವಾಗಿದೆ. ಎಂಟರಿಂದ ಹತ್ತು ಹೊಲಿಗೆ ಹಾಕುವಷ್ಟು ಗಾಯವಾಗಿದೆ. ಹಾಗಾಗಿ ಜನ ಜಮೀನಿಗೆ ಹೋಗಲು ಹೆದರುತ್ತಿದ್ದಾರೆ. ‘ಯಾರೋ ಕಿಡಿಗೇಡಿಗಳ ಮಂಗಕ್ಕೆ ತೊಂದರೆ ಕೊಟ್ಟಿರಬೇಕು. ಸುಮಾರು ಒಂದು ತಿಂಗಳಿಂದ ಇದೊಂದು ಮಂಗ ಸಮಸ್ಯೆ ಮಾಡುತ್ತಿದೆ. ಯಾರೇ ಟ್ರಾಕ್ಟರ್, ಬೈಕ್ನಲ್ಲಿ ಬಂದರೆ ದಾಳಿ ಮಾಡುತ್ತಿದೆ’ ಎಂದು ಕುಮಾರ್ ನಾಯ್ಕ ತಿಳಿಸಿದರು.
ಜಮೀನಿಗೆ, ಕೆಲಸಗಳಿಗೆ ಹೋಗಲು ಭಯ
ಒಂದು ಮಂಗದಿಂದಾಗಿ ಶೀರಿಹಳ್ಳಿ ತಾಂಡದ ಜನರು ತಮ್ಮ ಕೆಲಸ ಕಾರ್ಯಕ್ಕೆ ಹೋಗಲು ಹೆದರುತ್ತಿದ್ದಾರೆ. ಜಮೀನಿಗೆ ಹೋಗಲು ವಿಪರೀತ ಭಯ ಪಡುತ್ತಿದ್ದಾರೆ. ಹುಲ್ಲು ಕೊಯ್ಯಲು, ಜೋಳ ಮುರಿಯುವ ಟೈಮ್ ಆಗಿರುವುದರಿಂದ ಜಮೀನಿಗೆ ಹೋಗಲೇಬೇಕು. ಆದರೆ ಮಂಗದ ಕಾಟದಿಂದಾಗಿ ಮನೆ ಬಿಟ್ಟು ಹೊರ ಬರಲು ಆತಂಕ ಪಡುತ್ತಿದ್ದಾರೆ.
ಅರಣ್ಯ ಇಲಾಖೆ ಟೀಮ್ ಹಾಜರ್
ಮಂಗದ ಕಾಟದಿಂದ ಕಾಪಾಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಗ ಹಿಡಿಯಲು ಟ್ರ್ಯಾಪ್ ಸಿದ್ಧಪಡಿಸಿದ್ದಾರೆ. ಅಲ್ಲದೆ ಬಾದಮಿಯಿಂದ ಮಂಗ ಹಿಡಿಯುವವರನ್ನು ಕರೆಯಿಸಲಾಗುತ್ತಿದೆ. ಸದ್ಯ ಮಂಗದ ಕಾಟದಿಂದಾಗಿ ಮುಕ್ತಿಗಾಗಿ ಶೀರಿಹಳ್ಳಿ ತಾಂಡದ ಜನರು ಎದುರು ನೋಡುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]