ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020
ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು ಎಂದು ಮೇಯರ್ ಸುವರ್ಣಾ ಶಂಕರ್ ಅವರು ತಿಳಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಹಬ್ಬ ಆಯೋಜನೆ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಮೇಯರ್ ಸುವರ್ಣಾ ಶಂಕರ್, ಈ ಬಾರಿ ಮೆರವಣಿಗೆ ಇರುವುದಿಲ್ಲ. ಆದರೆ ಎಲ್ಲಾ ದೇವ ದೇವತೆಗಳನ್ನು ಒಂದು ಸೇರಿಸಿ ಬನ್ನಿ ಮುಡಿಯುವ ಕಾರ್ಯ ನಡೆಸಲಾಗುವುದು. ಇದೇ ರೀತಿ ಹಿಂದಿನ ವರ್ಷದಂತೆ ಇಡೀ ನಗರದ ದೀಪಾಲಂಕಾರ ಮಾಡಲಾಗುವುದು. ವಿಜಯ ದಶಮಿಗೆ ಸಂಬಂಧಿಸಿದಂತೆ ಇತರ ಯಾವುದೇ ದಸರಾ ಕಾರ್ಯಕ್ರಮಗಳು ಇರುವುದಿಲ್ಲ ಎಂದರು.
ಮನೆಯಲ್ಲೇ ಉತ್ಸವ ವೀಕ್ಷಣೆಗೆ ಲೈವ್
ಆಯುಕ್ತ ಚಿದಾನಂದ ವಟಾರೆ ಅವರು ಮಾತನಾಡಿ, ಈ ಬಾರಿ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ದಸರಾ ಆಚರಣೆ ಕುರಿತಾಗಿ ಇದುವರೆಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿಗಳು ಬಂದಿರುವುದಿಲ್ಲ. ಆದರೆ ಸರ್ಕಾರದ ಸೂಚನೆ ಪ್ರಕಾರ ಶಿವಮೊಗ್ಗದಲ್ಲಿ ಈ ಬಾರಿ ಸರಳವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಜನರು ಮನೆಯಲ್ಲಿಯೇ ಉತ್ಸವವನ್ನು ವೀಕ್ಷಿಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳ ಲೈವ್ ಸ್ಟ್ರೀಮಿಂಗ್ ಸಹ ಮಾಡಬಹುದಾಗಿದೆ ಎಂದು ಹೇಳಿದರು.
ಕಳೆದ ವರ್ಷ 17 ಲಕ್ಷ ಉಳಿತಾಯ
ಕಳೆದ ವರ್ಷ ದಸರಾ ಆಚರಣೆಗೆ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುಖಾಂತರ 1.80ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ 1.63ಕೋಟಿ ರೂ. ವೆಚ್ಚ ಮಾಡಲಾಗಿದ್ದು, 17ಲಕ್ಷ ರೂ. ಉಳಿತಾಯವಿದೆ. ಈ ಅನುದಾನ ಹಾಗೂ ಇನ್ನಿತರ ಉಳಿಕೆ ಅನುದಾನ ಬಳಸಿಕೊಂಡು ದಸರಾ ಸಾಂಪ್ರದಾಯಿಕವಾಗಿ ಆಚರಿಸಬಹುದಾಗಿದೆ ಎಂದು ಸಭೆಗೆ ತಿಳಿಸಿದರು.
ಸದಸ್ಯರಿಂದ ವಿವಿಧ ಅಭಿಪ್ರಾಯ
ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಅವರು ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಅತ್ಯಂತ ಸರಳವಾಗಿ ಹಬ್ಬವನ್ನು ಆಚರಿಸಬೇಕು. ನಮ್ಮ ಆಚರಣೆಗಳು ಕರೋನಾ ಹೆಚ್ಚಾಗಲು ಕಾರಣವಾಗಬಾರದು. ಜನರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯ ದಶಮಿಯ ಸಾಂಪ್ರದಾಯಿಕತೆಗೆ ಯಾವುದೇ ಧಕ್ಕೆ ಬಾರದಂತೆ ಅತ್ಯಂತ ಕಡಿಮೆ ಜನರನ್ನು ಸೇರಿಸಿ ಸರಳವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಸದಸ್ಯ ಜ್ಞಾನೇಶ್ವರ್ ತಿಳಿಸಿದರು.
ಯಾವುದೇ ಆಡಂಬರ, ಅದ್ದೂರಿತನವಿಲ್ಲದೇ ಸರಳವಾಗಿ ದಸರಾ ಆಚರಿಸಬಹುದಾಗಿದೆ. ದಸರಾ ಆಚರಣೆಗೆ ಮೀಸಲಾಗಿರಿಸಿರುವ ಅನುದಾನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಮಹಾನಗರ ಪಾಲಿಕೆ ವತಿಯಿಂದ 20ವೆಂಟಿಲೇಟರ್ ಒದಗಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಎಚ್.ಸಿ.ಯೋಗೀಶ್ ತಿಳಿಸಿದರು.
ಉತ್ಸವದ ಆಶಯಕ್ಕೆ ಧಕ್ಕೆ ಬಾರದಂತೆ ವ್ಯವಸ್ಥಿತವಾಗಿ ದಸರಾ ಆಯೋಜಿಸುವ ಕುರಿತು ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸದಸ್ಯ ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200