SHIVAMOGGA LIVE NEWS, 13 DECEMBER 2024
ಶಿವಮೊಗ್ಗ : ಪಂಚಮಸಾಲಿ, ದೀಕ್ಷಾ ಮಲೆಗೌಡ-ಗೌಡ ಲಿಂಗಾಯತರಿಗೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಹಾರ (Lati Charge) ನಡೆಸಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶಿವಮೊಗ್ಗ ಶಾಖೆಯಿಂದ ಗುರುವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು.
ಸ್ವತಃ ಹಿರಿಯ ಪೊಲೀಸ್ ಅಧಿಕಾರಿ ಆರ್.ಹಿತೇಂದ್ರ ಅವರು ಲಾಠಿ ಹಿಡಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ಸರ್ಕಾರ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಕ್ಷಮೆ ಕೇಳಬೇಕು. ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸೂಪರ್ ಮಾರ್ಕೆಟ್ಗಳ ಟ್ರೆಂಡ್ ಜೋರು, ನಿತ್ಯ ಸಾವಿರ ಸಾವಿರ ಗ್ರಾಹಕರು, ಕಾರಣವೇನು?
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರಾದ ಹೆಚ್.ವಿ.ಮಹೇಶ್ವರಪ್ಪ, ಜಿ.ಮಾಲತೇಶಪ್ಪ, ಎನ್.ಎಸ್.ಕುಮಾರ್, ಕೆ.ಆರ್. ವೀರೇಶ್, ಮಂಜುನಾಥ್, ವಿಜಯಕುಮಾರ್, ನಂಜುಂಡಪ್ಪ, ಬಸವರಾಜಪ್ಪ, ವಿಶ್ವೇಶ್ವರಯ್ಯ, ಎಂ.ದೇವೇಂದ್ರಪ್ಪ, ಡಿ.ಆರ್.ಕೃಷ್ಣಪ್ಪ ಮೊದಲಾದವರು ಇದ್ದರು.