ಶಿವಮೊಗ್ಗ ಲೈವ್.ಕಾಂ | SHIMOGA NEWS | 02 ಫೆಬ್ರವರಿ 2022
ರಸ್ತೆ ಪಕ್ಕದ ಗುಂಡಿಗೆ ಬಿದ್ದು ಅಂಧರೊಬ್ಬರು ಗಾಯಗೊಂಡು ಒಂದು ವಾರ ಕಳೆದ ನಂತರ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆ ಗುಂಡಿಗು ಸ್ಮಾರ್ಟ್ ಸಿಟಿಗೂ ಸಂಬಂಧವಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ಇವತ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸ್ಮಾರ್ಟ್ ಸಿಟಿ ಎಂ.ಡಿ ಸ್ಪಷ್ಟನೆ ಏನು?
‘ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ದಿನಾಂಕ: 27.01.2022 ರಂದು ಮದ್ಯಾಹ್ನ ಶಿವಮೊಗ್ಗ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಯೊಬ್ಬರು ಬಿದ್ದು ಗಾಯಗೊಂಡಿರುವುದಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಕಾರಣವಾಗಿರುವುದಿಲ್ಲ’
‘ಅದು ದಿನೇಶ್ ಇಂಜಿನಿಯರಿಂಗ್ ಲಿಮಿಟೆಡ್ ಎಂಬ ಕಂಪನಿಯವರು ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ಅನುವಾಗುವಂತೆ ಹಾರಿಜಾಂಟಲ್ ಡೈರೆಕ್ಷನ್ ಡ್ರಿಲ್ಲಿಂಗ್ ಗಾಗಿ ತೋಡಿದ ಗುಂಡಿಯಾಗಿರುತ್ತದೆ.’
‘ಸದರಿ ಕಂಪನಿಯವರಿಗೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯಾಪ್ತಿ ಪ್ರದೇಶದಲ್ಲಿ ಹೆಚ್.ಡಿ.ಡಿ. ಮಾಡದಂತೆ ಹಾಗೂ ಸ್ಮಾರ್ಟ್ ಸಿಟಿಯ ವತಿಯಿಂದ ಈಗಾಗಲೇ ಅಳವಡಿಸಿರುವ 7 ವೇ ಮಲ್ಟಿ ಡಕ್ಟ್ ಮುಖಾಂತರವೇ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವಂತೆ ದಿನಾಂಕ:27.12.2021 ರ ನೋಂದಾಯಿತ ಅಂಚೆಯ ಪತ್ರದ ಮೂಲಕ ತಿಳುವಳಿಕೆ ನೀಡಲಾಗಿದೆ ಹಾಗೂ ಈ ಕಂಪೆನಿಯ ಪ್ರತಿನಿಧಿಗಳಾದ ಸಂಜಯ್, ಪದ್ಮರಾಜ್ ಹಾಗೂ ಕಿರಣ್ ಎಂಬುವರಿಗೆ ಮುಖತ: ಹಾಗೂ ದೂರವಾಣಿ ಮೂಲಕ ಹಲವು ಬಾರಿ ತಿಳಿಸಲಾಗಿದೆ.’
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ಯಾವುದೇ ಪಾತ್ರ ಇರುವುದಿಲ್ಲ. ಬದಲಿಗೆ ಯಾವುದೇ ಆಕಸ್ಮಿಕಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದಾಗ್ಯೂ ನೀಡಿದ ಸೂಚನೆಯನ್ನು ಮೀರಿ ಯಾರಿಗೂ ತಿಳಿಯದಂತೆ ತಡರಾತ್ರಿ ವೇಳೆಯಲ್ಲಿ ಗುಂಡಿ ತೆಗೆದು ಅಪಘಾತಕ್ಕೆ ಕಾರಣರಾದ ‘ದಿನೇಶ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಯ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಈ ಕಚೇರಿ ವತಿಯಿಂದ ಪೊಲೀಸ್ ಅಧಿಕಾರಿಗಳನ್ನು ಕೋರಲಾಗಿದೆ.’
‘ನಗರದಲ್ಲಿ ಯಾವುದೇ ಆಕಸ್ಮಿಕಗಳು ನಡೆದಲ್ಲಿ ಮೂಲ ಕಾರಣವನ್ನು ಸರಿಯಾಗಿ ತಿಳಿದುಕೊಳ್ಳದೇ ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪಡೆಯದೇ ನೇರವಾಗಿ ಸ್ಮಾರ್ಟ್ ಸಿಟಿಯ ಮೇಲೆ ಅನಗತ್ಯ ಆಪಾದನೆ ಹೊರಿಸಿ ಪತ್ರಿಕೆಗಳಲ್ಲಿ ವರದಿ ಪ್ರಕಟಿಸುವುದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಆದ್ದರಿಂದ ಸ್ಟಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಯಾವುದೇ ಆಕಸ್ಮಿಕಗಳು ನಡೆದಾಗ ಘಟನೆಗೆ ಕಾರಣವನ್ನು ತಿಳಿದುಕೊಂಡು ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ಮಾಡುವುದು ಸೂಕ್ತವಾಗಿರುತ್ತದೆ’
ಇದನ್ನೂ ಓದಿ | ಹಿಡಿಶಾಪದ ಬಳಿಕ ಬಂತು ಬ್ಯಾರಿಕೇಡ್, ಕಾಲು ಮುರಿದುಕೊಂಡ ಯುವಕನನ್ನು ಕಾಡುತ್ತಿದೆ ಮತ್ತೊಂದು ಚಿಂತೆ
ಇದನ್ನೂ ಓದಿ | ಕಣ್ಣು ಕಾಣದ ವ್ಯಕ್ತಿಯ ಕಾಲು ಮುರಿದ ಶಿವಮೊಗ್ಗ ಸ್ಮಾರ್ಟ್ ಸಿಟಿ ಗುಂಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200