ರಾಗಿಗುಡ್ಡದಲ್ಲಿ ದೇವರ ಮೂರ್ತಿ ಕಿತ್ತೊಗೆದ ಕಿರಾತಕರು, ಬಿಗುವಿನ ವಾತಾವರಣ, ಈತನಕ ಏನೇನಾಯ್ತು? ಕಂಪ್ಲೀಟ್‌ ರಿಪೋರ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಗಣಪತಿ ಮೂರ್ತಿ ಮತ್ತು ನಾಗರ ಕಲ್ಲನ್ನು (Idols) ಕಿತ್ತೆಸೆದ ಆರೋಪದ ಹಿನ್ನೆಲೆ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಕಳೆದ ರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ದೌಡಾಯಿಸಿ ಪರಿಶೀಲಿಸಿದರು. ಶಾಸಕ ಎಸ್‌.ಎನ್.ಚನ್ನಬಸಪ್ಪ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರ ಮುಂಭಾಗ ಖಾಲಿ ಜಾಗವಿದೆ. ಅಲ್ಲಿ ಕಟ್ಟೆ ನಿರ್ಮಿಸಿ ಗಣಪತಿ ಮತ್ತು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಿರ್ಮಾಣ ಹಂತದ ಕಟ್ಟಡದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ತಂಗಿದ್ದ. ಶನಿವಾರ ಈ ಮನೆ ಬಳಿ ಬಂದಿದ್ದ ಆ ವ್ಯಕ್ತಿಯ ಸ್ನೇಹಿತ ನಾಗರ ಕಲ್ಲನ್ನು ಕಿತ್ತೆಸೆದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ragigudda bangarappa layout gods
ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಗಣಪತಿ ಮೂರ್ತಿ ಮತ್ತು ಪುನರ್‌ ಪ್ರತಿಷ್ಠಾಪಿಸಲಾದ ನಾಗರ ಕಲ್ಲು.

ಸ್ಥಳದಲ್ಲಿ ಬಿಗುವಿನ ವಾತಾವರಣ

ಅನ್ಯಕೋಮಿನ ಯುವಕರು ನಾಗರ ಕಲ್ಲನ್ನು ಕಿತ್ತೆಸೆದಿದ್ದಾರೆ ಎಂಬ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು, ಆಕ್ರೋಶ ವ್ಯಕ್ತಪಡಿಸಿದರು. ದೇವರ ವಿಗ್ರಹ ಕಿತ್ತೆಸೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಗಾರೆ ಕೆಲಸ ಮುಗಿಸಿ ಸಂಜೆ ಬರುವ ಹೊತ್ತಿಗೆ ದೇವರ ಮೂರ್ತಿಗಳನ್ನು ಕಿತ್ತೊಗೆದಿದ್ದಾರೆ. ಮೂರ್ತಿಗಳೆಲ್ಲ ಕೆಸರಾಗಿತ್ತು. ಇಲ್ಲಿ ಮೂರ್ತಿಗಳನ್ನು ಯಾಕೆ ಇಟ್ಟಿದ್ದಾರೆ ಎಂದು ಆ ದುಷ್ಕರ್ಮಿಗಳು ಪ್ರಶ್ನಿಸಿದ್ದಾರೆ. ನಮ್ಮ ಹುಡುಗರು ಮೂರ್ತಿಗಳನ್ನು ಎತ್ತಿಟ್ಟಿದ್ದರು.ಗಂಗಮ್ಮ, ಸ್ಥಳೀಯರು

ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಪೊಲೀಸ್‌ ಬಂದೋಬಸ್ತ್.
ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಪೊಲೀಸ್‌ ಬಂದೋಬಸ್ತ್.

ಪೊಲೀಸರು ದೌಡು, ಪರಿಶೀಲನೆ

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಎಎಸ್‌ಪಿ ಸಿ.ಜಿ.ಕಾರ್ಯಪ್ಪ, ಡಿವೈಎಸ್‌ಪಿ ಸಂಜೀವ್‌ ಕುಮಾರ್‌, ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಸೇರಿ ಪೊಲೀಸ್‌ ಸಿಬ್ಬಂದಿ ಇದ್ದರು. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದು, ಅವರ ಹೆಸರು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ » ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಪ್ರಕಟಿಸಿದ ಸಂಸದ ರಾಘವೇಂದ್ರ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸಿಮೆಂಟ್‌ ಕಟ್ಟೆ ಮೇಲಿದ್ದ ವಿಗ್ರಹಗಳನ್ನು ಕಿತ್ತೊಗೆಯಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು, ಘಟನೆ ಸಂಬಂಧ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ.ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ

ಬಂಗಾರಪ್ಪ ಬಡಾವಣೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಭೇಟಿ.
ಬಂಗಾರಪ್ಪ ಬಡಾವಣೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಭೇಟಿ.

ಬಡಾವಣೆಗೆ ಶಾಸಕ ಚನ್ನಬಸಪ್ಪ ಭೇಟಿ, ಆಕ್ರೋಶ

ಇನ್ನು, ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಶನಿವಾರ ರಾತ್ರಿಯೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಮತ್ತು ಬಿಜೆಪಿ ನಗರ ಘಟಕದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು. ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದರು.

ಈ ಬಡಾವಣೆಯಲ್ಲಿ ಕೆಲವರು ಸರ್ಕಾರಿ ಜಾಗ ಕಬಳಿಸಿ ಮನೆ ನಿರ್ಮಿಸುತ್ತಿದ್ದಾರೆ. ಬೆಳಗ್ಗೆ ಎದ್ದಾಗ ದೇವರ ಮೂರ್ತಿಗಳನ್ನು ನೋಡಬೇಕಾಗುತ್ತದೆ ಎಂದು ಕಿತ್ತುಹಾಕಿದ್ದಾರೆ. ಇಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ತೆರವು ಮಾಡಬೇಕು. ವಿಗ್ರಹಗಳನ್ನು ಕಿತ್ತು ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಎಸ್‌.ಎನ್.‌ಚನ್ನಬಸಪ್ಪ, ಶಾಸಕ

ಬಂಗಾರಪ್ಪ ಬಡಾವಣೆಗೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಮತ್ತು ಬಿಜೆಪಿ ಮುಖಂಡರು ಭೇಟಿ.
ಬಂಗಾರಪ್ಪ ಬಡಾವಣೆಗೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಮತ್ತು ಬಿಜೆಪಿ ಮುಖಂಡರು ಭೇಟಿ.

ಬೆಳಗ್ಗೆ ಈಶ್ವರಪ್ಪ ಭೇಟಿ, ಘಟನೆ ವಿರುದ್ಧ ಗರಂ

ಭಾನುವಾರ ಬೆಳಗ್ಗೆ ರಾಷ್ಟ್ರಭಕ್ತರ ಬಳಗದ ಪ್ರಮುಖರು ರಾಗಿಗುಡ್ಡದ ಬಂಗಾರಪ್ಪ ಬಡಾವಣೆಗೆ ಭೇಟಿ ನೀಡಿದ್ದರು. ಸ್ಥಳೀಯರ ಜೊತೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚರ್ಚೆ ನಡೆಸಿದರು. ಬಳಿಕ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವು ಮಾಡಬೇಕು ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರಿಗೆ ಸೋಮವಾರ ಸಂಜೆವರೆಗೆ ಗಡುವು ನೀಡಿದ್ದಾರೆ.

ಬಂಗಾರಪ್ಪ ಬಡಾವಣೆಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ರಾಷ್ಟ್ರಭಕ್ತರ ಬಳಗದ ಮುಖಂಡರು.
ಬಂಗಾರಪ್ಪ ಬಡಾವಣೆಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ರಾಷ್ಟ್ರಭಕ್ತರ ಬಳಗದ ಮುಖಂಡರು.

ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಸದ್ಯ ಮುಂಜಾಗ್ರತ ಕ್ರವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

June-2025-Report-Shivamogga-Live

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 6, 2025

Leave a Comment