ಶಿವಮೊಗ್ಗ ಲೈವ್.ಕಾಂ | 28 ಮಾರ್ಚ್ 2019
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ನಾಮಪತ್ರ ಇದ್ದ ಫೈಲ್, ದೇವಸ್ಥಾನದ ಗರ್ಭಗುಡಿಯಲ್ಲಿ ಜಾರಿಬಿತ್ತು. ಇದರಿಂದ ಕೆಲಕ್ಷಣ ರಾಘವೇಂದ್ರ ಮತ್ತವರ ಕುಟುಂಬ ವಿಚಲಿತರಾದ ಘಟನೆ ನಡೆಯಿತು.
ನಾಮಪತ್ರ ಸಲ್ಲಿಸುವ ಹಿನ್ನೆಲೆ, ಬೆಳಗ್ಗೆಯಿಂದಲೇ ರಾಘವೇಂದ್ರ, ಕುಟುಂಬ ಸಹಿತವಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ರಾಘವೇಂದ್ರ, ದೇವರ ಆಶೀರ್ವಾದ ಬೇಡಿದರು.
ನಂತರ ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನಕ್ಕೆ ಕುಟುಂಬ ಸಹಿತ ಭೇಟಿ ನೀಡಿದ್ದರು. ಈ ವೇಳೆ, ನಾಮಪತ್ರದ ಫೈಲನ್ನು ದೇವರ ಮುಂದಿಟ್ಟು ಪೂಜಿಸಲಾಗುತ್ತಿತ್ತು. ಮಂಗಳಾರತಿ ಆರಂಭವಾಗುತ್ತಿದ್ದಂತೆ, ದೇವರ ಮುಂದಿದ್ದ ನಾಮಪತ್ರದ ಫೈಲ್ ಜಾರಿಬಿತ್ತು. ಇದರಿಂದ ಕೆಲಕ್ಷಣ ರಾಘವೇಂದ್ರ ಮತ್ತವರ ಕುಟುಂಬದವರು ವಿಚಲಿತರಾದರು.
ಹಾರಲೇ ಇಲ್ಲ ಯಡಿಯೂರಪ್ಪ ಹೆಲಿಕಾಪ್ಟರ್
ಇನ್ನು, ಪುತ್ರ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ ಸಂದರ್ಭ, ಯಡಿಯೂರಪ್ಪ ಅವರು ಉಪಸ್ಥಿತರಿರಬೇಕಿತ್ತು. ಆದರೆ ಕಡೇ ಕ್ಷಣದಲ್ಲಿ ಯಡಿಯೂರಪ್ಪ ಗೈರಾದರು. ಬೆಂಗಳೂರಿನಲ್ಲಿದ್ದ ಯಡಿಯೂರಪ್ಪ ಅವರು ಹೆಲಿಕಾಪ್ಟರ್ ಮೂಲಕ, ಶಿವಮೊಗ್ಗಕ್ಕೆ ಆಗಮಿಸಬೇಕಿತ್ತು. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಇದೇ ಹೆಲಿಕಾಪ್ಟರ್’ನಲ್ಲಿ ಶಿವಮೊಗ್ಗಕ್ಕೆ ಭೇಟಿ ನಿಡಬೇಕಿತ್ತು. ಯಡಿಯೂರಪ್ಪ ಆಪ್ತ ಸಿದ್ದಲಿಂಗಸ್ವಾಮಿ ಸೇರಿದಂತೆ ಹಲವರು ಅವರಿಗಾಗಿ ಶಿವಮೊಗ್ಗ ಹೆಲಿಪ್ಯಾಡ್’ನಲ್ಲಿ ಕಾದಿದ್ದರು.
ಆದರೆ, ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ಟೇಕಾಫ್ ಆಗಲೇ ಇಲ್ಲ. ಹಾಗಾಗಿ ಯಡಿಯೂರಪ್ಪ ಅವರ ಶಿವಮೊಗ್ಗ ಪ್ರವಾಸ ದಿಢೀರ್ ರದ್ದಾಯಿತು. ವಿಚಾರ ತಿಳಿಯುತ್ತಿದ್ದಂತೆ ಯಡಿಯೂರಪ್ಪ ಬೆಂಬಲಿಗರು ಹೆಲಿಪ್ಯಾಡ್’ನಿಂದ ಹಿಂತಿರುಗಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]